ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮಾಲಿನ್ಯ ಸೃಷ್ಟಿ

ಬಿಜೆಪಿ ವಿರುದ್ಧ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂನಬಿ ಆಜಾದ್‌ ಆರೋಪ
Last Updated 6 ಮೇ 2018, 9:13 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಬಿಜೆಪಿಯು ಸಾಂ ಸ್ಕೃತಿಕ, ಸಾಮಾಜಿಕ ಮಾಲಿನ್ಯ ಸೃಷ್ಟಿಸಿ ದೇಶದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಆ ಮಾಲಿನ್ಯವನ್ನು ಈಗ ಕರ್ನಾಟಕಕ್ಕೂ ಹರಡಲು ಹವಣಿಸು ತ್ತಿದೆ’ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂನಬಿ ಆಜಾದ್‌ ದೂಷಿಸಿದರು.

ನಗರದ ಅಂಡೆ ಛತ್ರದ ಬಳಿ ಶನಿವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ‘ಬಹುತ್ವವು ಭಾರತದ ಅದ್ಭುತ. ಹಿಂದೂ, ಮುಸ್ಲಿಂ ಎಲ್ಲ ಸಮುದಾಯದವರ ಅನ್ಯೋನ್ಯ ಬಾಳ್ವೆಯೇ ದೇಶದ ವೈಶಿಷ್ಟ್ಯ. ಪ್ರಧಾನಿ ಮೋದಿ ಅವರು ಯಾವುದೋ ಹೊಸ ಗ್ರಹದಿಂದ ಬಂದವರಂತೆ ಆಡುತ್ತಾರೆ. ಹಿಂದೂ, ಮುಸ್ಲಿಂ, ದಲಿತ, ಹಿಂದುಳಿದ, ಮುಂದುವರಿದ ಸಮುದಾಯಗಳನ್ನು ಪ್ರತ್ಯೇಕ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಮೊರಾರ್ಜಿ ದೇಸಾಯಿ, ಚೌಧರಿ ಚರಣ್‌ ಸಿಂಗ್‌, ಎಚ್‌.ಡಿ.ದೇವೇಗೌಡ, ಚಂದ್ರಶೇಖರ್‌, ವಿ.ಪಿ.ಸಿಂಗ್‌, ಎ.ಬಿ.ವಾಜಪೇಯಿ ಮೊದಲಾದ ಹಲವಾರು ಪ್ರಧಾನಿಗಳನ್ನು ಕಂಡಿದ್ದೇವೆ. ಈಗಿನ ಪ್ರಧಾನಿ ಮೋದಿ ಇವೆರಲ್ಲರಿಗಿಂತ ಭಿನ್ನ. ಸಾಮರಸ್ಯ, ಬಹುಸಂಸ್ಕೃತಿಯ ದೇಶ ಇದು. ಧರ್ಮದ ಹೆಸರಿನಲ್ಲಿ ಮತಯಾಚನೆ ಇರಲಿಲ್ಲ. ಹೊಸ ಗ್ರಹದಿಂದ ಬಂದಂತೆ ಆಡುತ್ತಿರುವ ಮೋದಿ ಅವರು ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಉತ್ತರ ಭಾರತದಲ್ಲಿನ ರಾಜ್ಯಗಳು ಧರ್ಮ, ಜಾತಿ, ಹಿಂದುಳಿದ ಮತ್ತು ಮುಂದುವರಿದ ಚಕ್ರದ ಸುಳಿಯಲ್ಲಿ ಸಿಲುಕಿ ಹಿಂದುಳಿಯುತ್ತಿವೆ. ದಕ್ಷಿಣ ಭಾರತದ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಕರ್ನಾಟಕ ರಾಜ್ಯಗಳು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ. ಇಲ್ಲಿ ವಿವಿಧ ಜಾತಿ, ಧರ್ಮೀಯರ ನಡುವೆ ಭೇದಭಾವ ಇರಲಿಲ್ಲ. ಈ ರಾಜ್ಯಗಳನ್ನು ತೆಕ್ಕೆಗೆ ಹಾಕಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ತೆಕ್ಕೆಗೆ ಹಾಕಿ ಕೊಂಡರೆ ಇಲ್ಲಿಯೂ ಉತ್ತರ ಭಾರತದ ಸ್ಥಿತಿಯೇ ನಿರ್ಮಾಣವಾಗಲಿದೆ’ ಎಂದು ಹೇಳಿದರು.

‘ಬಾಲಕಿಯರಿಗೆ, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆ ದರೂ ಕಠಿಣ ಕ್ರಮಗಳನ್ನು ಜರುಗಿಸಿಲ್ಲ. ಅತ್ಯಾಚಾರ ಪ್ರಕರಣಗಳಲ್ಲಿರುವ ಬಿಜೆಪಿಯ ಜನಪ್ರತಿನಿಧಿಗಳ ವಿರುದ್ಧ ಶಿಸ್ತುಕ್ರಮವನ್ನು ಕೈಗೊಂಡಿಲ್ಲ. ಎಲ್‌ಪಿಜಿ ಸಿಲಿಂಡರ್‌ ಬೆಲೆ ಯುಪಿಎ ಸರ್ಕಾರದ ಅವಧಿಯಲ್ಲಿ ₹350 ಇತ್ತು. ಈಗ ಅದು ₹ 800 ಆಗಿದೆ. ಕಚ್ಚಾತೈಲ ಬೆಲೆ ಇಳಿಕೆಯಾಗಿದ್ದರೂ ಪೆಟ್ರೊಲ್‌, ಡೀಸೆಲ್‌ ದರ ಕಡಿಮೆ ಮಾಡಿಲ್ಲ’ ಎಂದರು.

‘ಗರಿಷ್ಠ ಮುಖಬೆಲೆಯ ನೋಟು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ ಟಿ) ಜಾರಿಯು ದೇಶದ ವಾಣಿಜ್ಯ ವಹಿವಾ ಟಿನ ಮೇಲೆ ದುಷ್ಪರಿಣಾಮ ಬೀರಿದೆ. ಬಹಳಷ್ಟು ವರ್ತಕರ ಮೇಲೆ ಆದಾಯ ತೆರಿಗೆ (ಐಟಿ), ಜಾರಿ ನಿರ್ದೇಶನಾಲಯ (ಇಡಿ) ದಾಳಿಗಳು ಅವ್ಯಾಹತವಾಗಿ ನಡೆಯುತ್ತಿವೆ’ ಎಂದು ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಲ್‌.ಶಂಕರ್‌ ಮಾತನಾಡಿ, ‘ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸುವುದು, ಕೈಗಾರಿಕೆ ಸ್ಥಾಪನೆ, ಕ್ಷೇತ್ರದಲ್ಲಿನ ಕೆರೆಗಳನ್ನು ತುಂಬಿಸಲು ನೀರಾವರಿ ಯೋಜನೆ ಇವೆಲ್ಲವೂ ನಮ್ಮ ಆದ್ಯತೆಯಾಗಿವೆ. ಈ ಚುನಾವಣೆಯು ಮೂಲಭೂತವಾದ ಮತ್ತು ಜಾತ್ಯತೀತವಾದ, ಜಾತಿ ಮತ್ತು ನೀತಿ, ಹಣ ಮತ್ತು ಗುಣ, ಅಭಿವೃದ್ಧಿ ಮತ್ತು ಸೋಮಾರಿತನ ನಡುವಿನ ಸಂಘರ್ಷವಾಗಿದೆ’ ಎಂದು ಹೇಳಿದರು.

ಕಲಾವಿದರಾದ ನಾಗರಾಜ ಮೂರ್ತಿ, ರೇಖಾದಾಸ್‌, ಗೌರಿಸಿರಿ, ಕಾಂಗ್ರೆಸ್‌ ಮುಖಂಡರಾದ ಸಿ.ಆರ್‌.ಸಗೀರ್‌ ಅಹಮದ್‌, ಪುಷ್ಪಲತಾ, ಸಯ್ಯದ್‌ ಹನೀಫ್‌, ನಿಸಾರ್‌ ಅಹಮದ್‌ ಇದ್ದರು.

ಮೋದಿಗೆ ಐದು ಪ್ರಶ್ನೆಗಳನ್ನು ಕೇಳಿ

‘ಇದೇ 9ರಂದು ಪ್ರಧಾನಿ ಮೋದಿ ಅವರು ಪ್ರಚಾರಕ್ಕೆ ಚಿಕ್ಕಮಗಳೂರಿಗೆ ಬರಲಿದ್ದಾರೆ. ಅವರಿಗೆ ಐದು ಪ್ರಶ್ನೆಗಳನ್ನು ನೀವು ಕೇಳಬೇಕು. ವಿದೇಶಿ ಬ್ಯಾಂಕುಗಳಲ್ಲಿನ ಕಾಳಧನ ತಂದು ಬಡವರ ಖಾತೆಗೆ ಜಮೆ ಮಾಡುವುದಾಗಿ ಹೇಳಿದ್ದ ಭರವಸೆ ಏನಾಯಿತು? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣ, ಬೆಲೆ ಏರಿಕೆಗೆ ಕಡಿವಾಣ ಭರವಸೆಗಳನ್ನು ಯಾಕೆ ಈಡೇರಿಸಿಲ್ಲ? ದೇಶದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ, ‘ಬೇಟಿ ಪಡಾವೋ ಬೇಟಿ ಬಚಾವೋ’ ಎಂದರೆ ಇದೇನಾ? ಎಂದು ಅವರನ್ನು ಪ್ರಶ್ನಿಸಿ’ ಎಂದು ತಿಳಿಸಿದರು.

**
ಬಿ.ಎಲ್‌.ಶಂಕರ್‌ ಅನುಭವಿ ರಾಜಕಾರಣಿ. ಚಿಕ್ಕಮಗಳೂರು ಅಭಿವೃದ್ಧಿ ನಿಟ್ಟಿನಲ್ಲಿ ಕಾಂಗ್ರೆಸ್‌ ಬೆಂಬಲಿಸಿ. ಕಾಂಗ್ರೆಸ್‌ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ
- ಗುಲಾಂನಬಿ ಆಜಾದ್‌, ರಾಜ್ಯಸಭೆ ಪ್ರತಿಪಕ್ಷ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT