ಬೆಂಗಳೂರು: ಬಳ್ಳಾರಿ, ಬಾಗಲಕೋಟೆ, ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಯ ಗುರುವಾರ ಧಾರಾಕಾರ ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ಜಿಟಿ ಜಿಟಿ ಮಳೆಯಾಗಿದೆ.
ಬಳ್ಳಾರಿಯಲ್ಲಿ ಎರಡು ದಿನಗಳಿಂದ ಮೋಡ ಕವಿದ ವಾತಾವರಣ, ನಿರಂತರ ತುಂತುರು ಮಳೆ ಸುರಿಯುತ್ತಿದ್ದು ಈ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಳೆ ಸುರಿದಿದೆ.
ಸಿರುಗುಪ್ಪದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಗರಿ ನದಿ ಮೊದಲ ಬಾರಿಗೆ ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದು ರಸ್ತೆ ದಾಟಲು ವಾಹನ ಸವಾರರು ಪರದಾಡಿದರು. ತಾಲ್ಲೂಕಿನ ಹಾಗಲೂರು ಹೊಸಹಳ್ಳಿ ಗ್ರಾಮದ ಬಳಿಯ ದೊಡ್ಡಹಳ್ಳದಲ್ಲಿ ಕೂಡ ಮಳೆ ನೀರಿನ ಪ್ರಮಾಣ ಹೆಚ್ಚಾಗಿದ್ದು ರಸ್ತೆ ಸೇತುವೆ ಮುಳುಗಿದೆ.
ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಗುರುವಾರ ಉತ್ತಮ ಮಳೆಯಾಯಿತು. ಯಾದಗಿರಿ ಮತ್ತು ಕೊಪ್ಪಳದಲ್ಲಿ ತುಂತುರು ಮಳೆ ಸುರಿಯಿತು.
ಕಲಬುರ್ಗಿ ಸೇರಿ ಜಿಲ್ಲೆಯ ವಿವಿಧೆಡೆ ಗುರುವಾರ ನಸುಕಿನಲ್ಲಿ ಮಳೆಯಾಯಿತು. ತಾಲ್ಲೂಕಿನ ಶ್ರೀನಿವಾಸ ಸರಡಗಿಯಲ್ಲಿ ಬರೋಬ್ಬರಿ 102 ಮಿ.ಮೀ ಮಳೆ ಸುರಿದಿದೆ.ಗೊಬ್ಬೂರ–ಬಿ ಗ್ರಾಮದ ಸುತ್ತ 78 ಮಿ.ಮೀ, ಕಡಗಂಚಿಯಲ್ಲಿ 58, ಔರಾದ್ನಲ್ಲಿ 57, ಇವನಿ ಹಾಗೂ ಅಂಬಲಗಾದಲ್ಲಿ 54, ಸಂತನೂರ ಸುತ್ತ 50 ಮಿ.ಮೀ ಮಳೆಯಾಗಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮದ ಬಳಿ ನಾರಾಯಣಪುರ ಬಲದಂಡೆ ಕಾಲುವೆಯ 12ನೇ ವಿತರಣಾ ಕಾಲುವೆಯಲ್ಲಿ ಮಳೆ ನೀರು ಸೇರಿ ನೀರಿನ ರಭಸ ಹೆಚ್ಚಿದ್ದರಿಂದ ಒಡೆದಿದೆ. ನೀರು ಗುಡ್ಡದ ಕಡೆಗೆ ಹರಿದ ಕಾರಣ ಯಾವುದೇ ಬೆಳೆ ಹಾನಿಯಾಗಿಲ್ಲ. ಜಾಲಹಳ್ಳಿಯ 33 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಳೆ ನೀರು ಸಂಗ್ರಹವಾದ್ದರಿಂದ ಎರಡು ದಿನಗಳಿಂದ ಪಟ್ಟಣಕ್ಕೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.