ಹರಪನಹಳ್ಳಿ: ಶೋಷಿತ ಸಮುದಾಯದಲ್ಲಿ ಹುಟ್ಟಿ, ಬಡತನ, ಅವಮಾನ, ದಬ್ಬಾಳಿಕೆಗಳನ್ನು ಎದುರಿಸಿ ಇಡೀ ವಿಶ್ವವೇ ಒಪ್ಪಿಕೊಳ್ಳುವಂತಹ ಶ್ರೇಷ್ಠ ಸಂವಿಧಾನ ರಚಿಸಿದ ಧೀಮಂತ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಕಬ್ಬಳ್ಳಿ ಮೈಲಪ್ಪ ಹೇಳಿದರು.
ಪಟ್ಟಣ್ಣದ ತೆಗ್ಗಿನಮಠದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಸಂಘಟನೆ ನೇತೃತ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮದಿನಾಚರಣೆ ಹಾಗೂ ಎ.ಜೆ.ಸದಾಶಿವ ಆಯೋಗದ ವರದಿ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಭಾರತ ಸಂವಿಧಾನವೇ ಶ್ರೇಷ್ಠ ಗ್ರಂಥ. ಇಂತಹ ಸಂವಿಧಾನವನ್ನು ಪ್ರಪಂಚವೇ ಕೊಂಡಾಡುತ್ತಿರುವುದು ಹೆಮ್ಮೆಯ ಸಂಗತಿ. ಪ್ರಸ್ತುತ ಸಂವಿಧಾನಕ್ಕೆ ಅಪಮಾನವಾಗುವಂತ ಹೇಳಿಕೆಗಳನ್ನು ಕೇಂದ್ರದ ಮಂತ್ರಿ ಅನಂತಕುಮಾರ್ ಹೆಗಡೆ ನೀಡುತ್ತಿದ್ದು, ದಲಿತ ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ. ಇಂತಹ ಮಂತ್ರಿಗಳನ್ನ ಸಚಿವ ಸಂಪುಟದಿಂದ ತೆಗೆದು ಹಾಕಬೇಕು’ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ವಕೀಲರಾದ ಪುಣಬಗಟ್ಟ ನಿಂಗಪ್ಪ ಮಾತನಾಡಿ, ‘ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸಿಲ್ಲ. ನಮ್ಮ ಒಳಪಂಗಡಗಳನ್ನು ಛಿದ್ರಗೊಳಿಸುವಂತಹ ಕೃತ್ಯಗಳು ನಡೆಯುತ್ತಿರುವುದು ಬೇಸರದ ವಿಷಯ’ ಎಂದು ಹೇಳಿದರು.
ತಾಲ್ಲೂಕು ಸಂಚಾಲಕ ಪುಣಬಗಟ್ಟ ಆರ.ಕೆ.ಮಂಜಪ್ಪ ಮಾತನಾಡಿ, ‘ಕಳೆದ ದಶಕಗಳಿಂದ ಕಾಂಗ್ರೆಸ್ ಪಕ್ಷವನ್ನು ಶೋಷಿತ ಸಮುದಾಯಗಳು ಬೆಂಬಲಿಸುತ್ತಾ ಬಂದಿವೆ. ಆದರೆ ಮಾದಿಗ ಸಮುದಾಯದ ಧ್ವನಿಯಾದ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸದೇ ಸಮುದಾಯಕ್ಕೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.