ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಸಂಬಂಧ ಚರ್ಚಿಸಲು ಆಡಳತಾರೂಢ ಎಐಎಡಿಎಂಕೆ ಪಕ್ಷವು ಇದೇ 22ರಂದು ಸರ್ವಪಕ್ಷ ಸಭೆ ಕರೆದಿದೆ. ಸಭೆಯಲ್ಲಿ ವಿರೋಧ ಪಕ್ಷ ಡಿಎಂಕೆ ಭಾಗಿಯಾಗಲಿದೆ.
ತೀರ್ಪಿನ ಬಳಿಕ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಡಿಎಂಕೆ ಪಕ್ಷ ಸರ್ವಪಕ್ಷಗಳ ಸಭೆ ಕರೆದಿತ್ತು. ಈ ವಾರ ಹೊಸ ಪಕ್ಷ ಘೋಷಣೆ ಮಾಡಲಿರುವ ನಟ ಕಮಲ್ ಹಾಸನ್ ಕೂಡಾ ಸಭೆಗೆ ಬರಲು ಒಪ್ಪಿದ್ದಾರೆ ಎಂದು ಪಕ್ಷದ ಕಾರ್ಯಾಧ್ಯಕ್ಷ ಸ್ಟಾಲಿನ್ ಹೇಳಿದ್ದರು.
ಆದರೆ ಸರ್ಕಾರ ತಡವಾಗಿಯಾದರೂ ಸಭೆ ಕರೆಯಲು ನಿರ್ಧರಿಸಿರುವುದರಿಂದ ಅದರಲ್ಲಿ ಭಾಗಿಯಾಗುವುದಾಗಿ ಸ್ಟಾಲಿನ್ ತಿಳಿಸಿದ್ದಾರೆ. ಅಲ್ಲದೆ ತಾನು ಕರೆದಿದ್ದ ಸರ್ವಪಕ್ಷ ಸಭೆಯನ್ನು ರದ್ದುಗೊಳಿಸಿದೆ. ಸಭೆ ಕರೆಯಲು ಆಡಳಿತ ಪಕ್ಷ ಎಐಎಡಿಎಂಕೆ ತಕ್ಷಣ ಮುಂದಾಗುತ್ತಿಲ್ಲ ಎಂದು ಅವರು ಈ ಮೊದಲು ಆರೋಪಿಸಿದ್ದರು.