ನಾಪೋಕ್ಲು (ಕೊಡಗು): ನಾಪೋಕ್ಲು ಪಟ್ಟಣ ಹಾಗೂ ಸಮೀಪದ ಕೊಳಕೇರಿ, ಕುಂಜಿಲ, ಕಕ್ಕಬ್ಬೆ ಭಾಗದಲ್ಲಿ ಶನಿವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದೆ.
ಕುಂಜಿಲ ಗ್ರಾಮದಲ್ಲಿ 35 ಮಿ.ಮೀ ಮಳೆಯಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ 25 ಮಿ.ಮೀ ಮಳೆ ಸುರಿದಿದೆ. ಮಧ್ಯಾಹ್ನ 2.45 ರಿಂದ ಆರಂಭಗೊಂಡ ಮಳೆ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸುರಿಯಿತು.
ಬಿರುಸಿನ ಮಳೆಯಿಂದಾಗಿ ಕಾಫಿ ಬೆಳೆಗಾರರು ಸಂತಸಗೊಂಡಿದ್ದಾರೆ. ಮಾರ್ಚ್ನಲ್ಲಿ ಕಾಫಿಗೆ ಹೂಮಳೆಯಾಗಿರುವ ಹಿನ್ನೆಲೆಯಲ್ಲಿ ಇದೀಗ ಸುರಿದಿರುವ ಮಳೆ ಬ್ಯಾಕಿಂಗ್ ಮಳೆಯಾಗಿದ್ದು ಕಾಫಿ ಇಳುವರಿಗೆ ಪೂರಕವಾಗಲಿದೆ ಎಂದು ಬೇತು ಗ್ರಾಮದ ಕಾಫಿ ಬೆಳೆಗಾರ ಕಾವೇರಪ್ಪ ಹೇಳಿದರು.
ಆಲಿಕಲ್ಲು ಮಳೆ:ಹುಬ್ಬಳ್ಳಿ: ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಯಲ್ಲಿ ಶನಿವಾರ ಮಳೆಯಾಗಿದೆ. ಬೆಳಗಾವಿಯ ಬೈಲಹೊಂಗಲ, ಗದಗದ ನರಗುಂದದಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ.
ಹದವಾದ ಮಳೆ: ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ಬಾಳೆಹೊಳೆ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಶನಿವಾರ ಸಂಜೆ ಹದವಾದ ಮಳೆ ಸುರಿದಿದೆ. ಸಂಜೆ 4ರ ವೇಳೆ ಆರಂಭವಾದ ಮಳೆಯು ಗುಡುಗು ಮತ್ತು ಸಿಡಿಲಿನ ಅಬ್ಬರದ ನಡುವೆ ಅರ್ಧ ಗಂಟೆ ಕಾಲ ಸುರಿಯಿತು.
ತುಂತುರು ಮಳೆ:ಶಿವಮೊಗ್ಗ ಜಿಲ್ಲೆಯ ಕೆಲವೆಡೆ, ಶಿಕಾರಿಪುರದಲ್ಲಿ ತುಂತುರು ಮಳೆಯಾಗಿದ್ದರೆ, ಕೋಣಂದೂರಿನಲ್ಲಿ ಹತ್ತು ನಿಮಿಷಗಳ ಕಾಲ ಸಾಧಾರಣ ಮಳೆಯಾಗಿದೆ. ಸಾಗರ, ಹೊಸನಗರ, ಕೋಣಂದೂರಿನಲ್ಲಿ ಗುಡುಗು ಮಾತ್ರ ಇತ್ತು.
ಧಾರಾಕಾರ ಮಳೆ: ಸಾಗರ ತಾಲ್ಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ಶನಿವಾರ ಸಂಜೆ ಭಾರಿ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಗಾಳಿಯ ರಭಸಕ್ಕೆ ಕೆಲವು ಮನೆಗಳ ಮೇಲೆ ಮರ ಉರುಳಿ ಬಿದ್ದು ಅಪಾರ ನಷ್ಟ ಉಂಟಾಗಿದೆ.