ಹೆಸರಘಟ್ಟ: ‘ಮುಖ್ಯಮಂತ್ರಿ ಜತೆ ಇನ್ನು ಒಂದು ವಾರದೊಳಗೆ ಶಿವರಾಮ ಕಾರಂತ ಬಡಾವಣೆಯ ಸಮಸ್ಯೆ ಬಗ್ಗೆ ಚರ್ಚೆ ಮಾಡಲಾಗುವುದು’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಭರವಸೆ ನೀಡಿದ್ದಾರೆ. ಈ ಭರವಸೆಯ ಮೇಲೆ ಏರ್ ಷೋಗೆ ಕಪ್ಪು ಬಾವುಟ ತೋರಿಸುವ ಪ್ರತಿಭಟನೆಯಿಂದ ಹಿಂದೆ ಸರಿಯಲಾಯಿತು’ ಎಂದು ಶಿವರಾಮಕಾರಂತ ಬಡಾವಣೆ ಹೋರಾಟ ಸಮಿತಿಯ ಅಧ್ಯಕ್ಷ ನಂಜುಂಡಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಬಡಾವಣೆ ನಿರ್ಮಾಣದಿಂದ ಅಗುವ ತೊಂದರೆಗಳನ್ನು ಅವರಿಗೆ ಮನದಟ್ಟು ಮಾಡಲಾಗಿದೆ. ಬಿ.ಡಿ.ಎ. ಅಧಿಕಾರಿಗಳು ಕೋರ್ಟಿಗೆ ಮರೆಮಾಚಿರುವ ಸತ್ಯಗಳನ್ನು ಹೇಳಿದ್ದೇವೆ’ ಎಂದು ಅವರು ತಿಳಿಸಿದರು.
‘ಶಿವರಾಮಕಾರಂತ ಬಡಾವಣೆಯ ಯೋಜನೆಯನ್ನು ಸಂಪೂರ್ಣವಾಗಿ ಕೈ ಬಿಡುವಂತೆ ಉಪಮುಖ್ಯಮಂತ್ರಿಯವರಲ್ಲಿ ಮನವಿ ಮಾಡಲಾಗಿದೆ. ಬಿಡಿಎ ಅಧಿಕಾರಿಗಳು, ಮುಖ್ಯಮಂತ್ರಿ ಮತ್ತು ರೈತರು ಒಂದೆಡೆ ಸೇರಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ರೈತ ಮುಖಂಡ ಶಂಕರ ತಿಳಿಸಿದರು.
‘ಸರ್ಕಾರ ಮತ್ತೆ ವಿಳಂಬ ನೀತಿ ಅನುಸರಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಅವರು ಎಚ್ಚರಿಸಿದರು.