ಬೆಂಗಳೂರು: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಹೊಸ ಕಾಲೇಜುಗಳ ಸ್ಥಾಪನೆ, ಕೋರ್ಸ್ಗಳ ಆರಂಭ ಮತ್ತು ವಿದ್ಯಾರ್ಥಿ ಪ್ರಮಾಣ ಹೆಚ್ಚಳ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳುವುದು ಕಡ್ಡಾಯ ಎಂದು ಉನ್ನತ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಒಂದು ವೇಳೆ ವಿಶ್ವವಿದ್ಯಾಲಯಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ಪಡೆಯದೇ ಪ್ರವೇಶ ನೀಡಿದರೆ, ಸಂಬಂಧಿಸಿದ ಶಿಕ್ಷಣ ಸಂಸ್ಥೆಯನ್ನೇ ಜವಾಬ್ದಾರಿಯನ್ನಾಗಿಸಿ, ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಉನ್ನತ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.
ವಿಶ್ವವಿದ್ಯಾಲಯಗಳು ಮಾರ್ಚ್ 31 ರೊಳಗೆ ಅನುಮೋದನೆಗೆ ಪ್ರಸ್ತಾಪನೆ ಸಲ್ಲಿಸಬೇಕು. ಆದರೆ, ಸಾಕಷ್ಟು ಸಂದರ್ಭಗಳಲ್ಲಿ ಸಂಯೋಜಿತ ಪ್ರಸ್ತಾವನೆಗಳು ಶೈಕ್ಷಣಿಕ ಪ್ರವೇಶ ಆರಂಭವಾದ ಬಳಿಕ ಬರುತ್ತವೆ. ಮಂಜೂರಾತಿಯೂ ವಿಳಂಬವಾಗುತ್ತಿದ್ದು, ಇದರಿಂದ ತೊಂದರೆಗೊಳಗಾದ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗುತ್ತಿವೆ. ಈ ಸಮಸ್ಯೆಯನ್ನು ತಪ್ಪಿಸಲು ಶೈಕ್ಷಣಿಕ ವರ್ಷದ ಆರಂಭದಲ್ಲೇ ಅನುಮೋದನೆ ಪಡೆಯವುದು ಕಡ್ಡಾಯ ಎಂದು ಉನ್ನತ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅನುಮೋದನೆ ಖಚಿತಪಡಿಸಿಕೊಳ್ಳಬೇಕು
ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದಕ್ಕೆ ಮುನ್ನ ವಿಶ್ವವಿದ್ಯಾಲಯದ ಅನುಮೋದನೆ ಪಡೆದಿದೆಯೊ ಇಲ್ಲವೊ ಎಂಬುದನ್ನು ಪೋಷಕರು ಖಚಿತಪಡಿಸಿಕೊಳ್ಳಬೇಕು. ಆ ಬಳಿಕವೇ ಪ್ರವೇಶ ಪಡೆಯಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.