ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣದಲ್ಲಿ ಇತ್ತೀಚೆಗೆ ಬಾಂಬ್ ಸ್ಫೋಟಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ನಿಲ್ದಾಣದ ವ್ಯವಸ್ಥಾಪಕ ವರುಣ ಕುಮಾರ್ ದಾಸ್ ಹಾಗೂ ಆರ್ ಪಿಎಫ್ ಪೊಲೀಸ್ (ಎಎಸ್ಐ) ಮಂಜುನಾಥ ಕಾಮತ್ ಅಮಾನತುಗೊಂಡವರು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಶನಿವಾರ ನಿಲ್ದಾಣಕ್ಕೆ ಭೇಟಿ ನೀಡಿ ಘಟನಾ ಸ್ಥಳವನ್ನು ಪರಿಶೀಲಿಸಿದರು. ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರು ದಿನಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ವಿಮಾನ ನಿಲ್ದಾಣಗಳಲ್ಲಿ ಇರುವ ಮಾದರಿಯಲ್ಲಿಯೇ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಸ್ಕ್ಯಾನಿಂಗ್ ಯಂತ್ರಗಳನ್ನು ಅಳವಡಿಸಲಾಗುವುದು. ಒಂದು ತನಿಖಾ ತಂಡ ಇಂದು ಸಂಜೆ ವೇಳೆಗೆ ಇಲ್ಲಿಗೆ ಬಂದು ಪರಿಶೀಲನೆ ನಡೆಸಲಿದೆ ಎಂದರು.
ರೈಲ್ವೆ ಯನ್ನು ಖಾಸಗೀರಣ ಮಾಡುತ್ತಿಲ್ಲ. ಗುಣಮಟ್ಟ ಹೆಚ್ಚಿಸಲು ಕಾರ್ಪೊರೇಟೀಕರಣ ಮಾಡಲಾಗುತ್ತಿದೆ. ಇದರಿಂದ ಎಲ್ಲರಿಗೂ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಇಲಾಖೆಯ ಭದ್ರತಾ ಸಿಬ್ಬಂದಿ ಜೊತೆ ಪ್ರಯಾಣಿಕರನ್ನು ಕೂಡ ಎಚ್ಚರಿಕೆಯಿಂದ ಇರಬೇಕು. ಶಂಕಾಸ್ಪದ ವಸ್ತುಗಳು ಕಂಡು ಬಂದರೆ ರೈಲ್ವೆ ಸಿಬ್ಬಂದಿಗೆ ಮಾಹಿತಿ ಕೊಡಬೇಕು ಎಂದರು.
ಸ್ಫೋಟ: ಗಾಯಾಳು ಭೇಟಿ ಮಾಡಿದ ಕೇಂದ್ರ ಸಚಿವ ಅಂಗಡಿ
ರೈಲು ನಿಲ್ದಾಣದಲ್ಲಿ ಸ್ಫೋಟಕ ವಸ್ತು ಪರೀಕ್ಷಿಸಲು ಹೋಗಿ ಗಾಯಗೊಂಡು ಕಿಮ್ಸ್'ಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹುಸೇನಸಾಬ್ ನಾಯಕವಾಲೆ ಅವರನ್ನು ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಶನಿವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಹುಸೇನಸಾಬ್ ಅವರ ಕೈಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಆರೋಗ್ಯ ಸುಧಾರಿಸುತ್ತಿದೆ. ಅನುಮಾನಾಸ್ಪದ ವಸ್ತುವನ್ನು ಪರೀಕ್ಷಿಸಲು ಮುಂದಾಗಿದ್ದು ಅವರ ತಪ್ಪು' ಎಂದು ಅಭಿಪ್ರಾಯಪಟ್ಟರು.
'ರೈಲ್ವೆ ಜಿಎಂ ಅವರ ಅಧಿಕಾರ ವ್ಯಾಪ್ತಿಯಿಂದ ಗಾಯಾಳುಗೆ ₹50 ಸಾವಿರ ಪರಿಹಾರ ನೀಡಲಾಗಿದೆ. ಅವರ ಭವಿಷ್ಯದ ದೃಷ್ಟಿಯಿಂದ ಉದ್ಯೋಗ ನೀಡುವ ಕುರಿತು ದೆಹಲಿಯ ರೈಲ್ವೆ ಮಂಡಳಿಗೆ ಪತ್ರ ಬರೆಯಲಾಗುವುದು' ಎಂದರು.
ನೈರುತ್ಯ ರೈಲ್ವೆ ವಲಯದ ಜಿಎಂ ಎ.ಕೆ. ಸಿಂಗ್, ಡಿಜಿಎಂ ಇ. ವಿಜಯಾ, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಅರುಣಕುಮಾರ ಸಿ. ಇದ್ದರು.