ಬೆಂಗಳೂರು: ಮೈಸೂರಿನ ಧರ್ಮರಾಜಚೆಟ್ಟಿ ಅಂಡ್ ಸನ್ಸ್ ಅವರ ಮನೆಯ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಲೆಕ್ಕ ಕೊಡದ ₹ 5.8 ಕೋಟಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಹಣ ಮತ್ತೊಬ್ಬ ಸಿಲ್ಕ್ ವ್ಯಾಪಾರಿ ಸಂದೀಪ್ ಅವರಿಗೆ ಸೇರಿದ್ದಾಗಿದೆ.
ಇದು ಮೈಸೂರಿನಲ್ಲಿ ಒಂದೇ ಸ್ಥಳದಲ್ಲಿ ಐ.ಟಿ ವಶಪಡಿಸಿಕೊಂಡ ಅಧಿಕ ಮೊತ್ತವಾಗಿದೆ. ಗುಪ್ತಚರ ವಿಭಾಗದ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಹಣ ಪತ್ತೆಯಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಧರ್ಮರಾಜ ಚೆಟ್ಟಿ ಅಂಡ್ ಸನ್ಸ್ ಮೈಸೂರಿನ ಪ್ರಮುಖ ಸ್ಥಳದಲ್ಲಿದ್ದ ತಮ್ಮ ಸ್ಥಿರಾಸ್ತಿಯನ್ನು ಪ್ರಸಿದ್ಧ ಸಿಲ್ಕ್ ವ್ಯಾಪಾರಿ ಮನ್ನಾರ್ ಸಿಲ್ಕ್ಸ್ನ ಪಾಲುದಾರ ಸಂದೀಪ್ ಅವರಿಗೆ ₹ 13.75 ಕೋಟಿಗೆ ಮಾರಾಟ ಮಾಡಿದ್ದರು. ಇದರಲ್ಲಿ ₹8 ಕೋಟಿಯನ್ನು ಬ್ಯಾಂಕ್ ಖಾತೆ ಮೂಲಕ ಪಾವತಿಸಲಾಗಿತ್ತು. ಉಳಿದ ₹ 5.75 ಕೋಟಿಯನ್ನು ನಗದಿನಲ್ಲಿ ಕೊಡುವುದಿತ್ತು.
ಆಸ್ತಿ ಖರೀದಿದಾರರು ₹ 5.75 ಕೋಟಿ ಹಣವನ್ನು ಆಸ್ತಿ ಮಾರಾಟಗಾರರಿಗೆ ಹಸ್ತಾಂತರಿಸುವ ಸಮಯದಲ್ಲಿ ದಾಳಿ ನಡೆಸಿದ ಐ.ಟಿ ಅಧಿಕಾರಿಗಳು, ತೆರಿಗೆ ತಪ್ಪಿಸಿ ಹಸ್ತಾಂತರಿಸುತ್ತಿದ್ದ ನಗದನ್ನು ವಶಪಡಿಸಿಕೊಂಡರು ಎಂದು ಮೂಲಗಳು ಹೇಳಿವೆ.
ಸಂದೀಪ್, ಮೈಸೂರಿನ ಪ್ರಮುಖ ವ್ಯಾಪಾರ ಕೇಂದ್ರದಲ್ಲಿ ಜವಳಿ ಹಾಗೂ ರೇಷ್ಮೆ ಬಟ್ಟೆಗಳ ವ್ಯಾಪಾರ ಮಾಡುತ್ತಿದ್ದು, ಅವರಿಗೆ ಸೇರಿದ ಮಳಿಗೆಗಳನ್ನು ಶೋಧಿಸಲಾಗಿದೆ. ಈ ಕುರಿತ ಪ್ರತಿಕ್ರಿಯೆಗೆ ಸಂದೀಪ್ ಸಿಗಲಿಲ್ಲ. ಆದರೆ, ಯಾವುದೇ ಐ.ಟಿ ದಾಳಿ ನಡೆದಿಲ್ಲ ಎಂದು ಅವರ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.