ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಯಾದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರನ್ನು ಜನಪ್ರತಿನಿಧಿಗಳ ಕೋರ್ಟ್ ಪೊಲೀಸರ ವಶಕ್ಕೆ ನೀಡಿದೆ.
ತಮ್ಮ ವಿರುದ್ಧ ಈ ಮೊದಲು ಹೊರಡಿಸಲಾಗಿದ್ದ ಜಾಮೀನುರಹಿತ ವಾರಂಟ್ ರಿಕಾಲ್ ಮಾಡಿಸಿಕೊಳ್ಳಲು ನಾಗೇಂದ್ರ ಅವರು ಇಲ್ಲಿನ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಹಾಜರಾದರು.
ಮಧ್ಯಾಹ್ನ 1.30ರ ವೇಳೆಯಲ್ಲಿ ಕೋರ್ಟ್ಗೆ ಹಾಜರಾದ ಕೂಡಲೇ ಅವರನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳುವಂತೆ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಆದೇಶಿಸಿದರು.
ಈ ಪ್ರಕರಣದಲ್ಲಿ ಚೆನ್ನೈನ ಸಿಬಿಐ ಅಧಿಕಾರಿಗಳು ಈಗಾಗಲೇ ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಮರೆಯಾಗಿದ್ದ ಶಾಸಕರು! ಮಧ್ಯಾಹ್ನ 2 ಗಂಟೆಗೆ ಊಟದ ವಿರಾಮದ ವೇಳೆಯಲ್ಲಿ ಶಾಸಕ ನಾಗೇಂದ್ರ ಅವರು ಕೆಲಹೊತ್ತು ಪೊಲೀಸ್ ವಶದಿಂದ ಕಣ್ಮರೆಯಾಗಿದ್ದರು. ಇದರಿಂದ ಕಂಗಾಲದ ಪೊಲೀಸ್ ಬಿ. ಅರ್.ಫಾಲಾಕ್ಷ ಈ ಸಂಗತಿಯನ್ನು ಬೆಂಚ್ ಕ್ಲರ್ಕ್ ಗಮನಕ್ಕೆ ತಂದರು.
ನಾಗೇಂದ್ರ ಅನುಯಾಯಿಗಳು, "ಎಲ್ಲೂ ಹೋಗಿಲ್ಲ ಬಿಡ್ರೀ. ಊಟಕ್ಕೆ ಹೋಗಿದ್ದರು" ಎಂದು ಫಾಲಾಕ್ಷ ಅವರಿಗೇ ತಿರುಗಿ ಉತ್ತರಿಸಿದರು. ಅಷ್ಟು ಹೊತ್ತಿಗೆ ನಾಗೇಂದ್ರ ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಕೋರ್ಟ್ ಒಳಗೆ ಬಂದು ಕುಳಿತರು.