ಕಾರವಾರ:ಉಡುಪಿ ಜಿಲ್ಲೆ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಇಸ್ರೊ ನೆರವು ಕೋರಲಾಗಿದೆ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡತಿಳಿಸಿದ್ದಾರೆ.
ಅವರು ನಾಪತ್ತೆಯಾದ ದೋಣಿಯಲ್ಲಿದ್ದ ಕುಮಟಾ ತಾಲ್ಲೂಕು ಮಾದನಗೆರೆ ನಿವಾಸಿ ಸತೀಶ ಈಶ್ವರ ಹರಿಕಂತ್ರ ಅವರ ಮನೆಗೆ ಬುಧವಾರ ಭೇಟಿ ನೀಡಿದರು. ಸಚಿವರ ಜತೆ ಮಾತನಾಡಿದ ಕುಟುಂಬ ಸದಸ್ಯರು,ತಮ್ಮ ಆತಂಕವನ್ನು ವಿವರಿಸಿ ಕಣ್ಣೀರಿಟ್ಟರು. ಕುಟುಂಬದವರಿಗೆ ಧೈರ್ಯತುಂಬಿದ ಬಳಿಕ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಡಿ.13ರಂದು ಮೀನುಗಾರಿಕೆಗೆ ತೆರಳಿದ‘ಸುವರ್ಣ ತ್ರಿಭುಜ’ ದೋಣಿಯಲ್ಲಿ ಏಳು ಮೀನುಗಾರರಿದ್ದರು. ಅವರುಇತರ ಮೀನುಗಾರರ ಜತೆ ಡಿ.15ರ ರಾತ್ರಿ ಒಂದು ಗಂಟೆಯವರೆಗೆ ಸಂಪರ್ಕದಲ್ಲಿದ್ದರು.ನಂತರ ಕಡಿತಗೊಂಡ ಸಂಪರ್ಕಮತ್ತೆ ಸಾಧ್ಯವಾಗಿಲ್ಲ. ದೋಣಿಯಲ್ಲಿದ್ದ ಮೀನುಗಾರರ ಪತ್ತೆಗೆ ನಿರಂತರ ಪ್ರಯತ್ನಗಳುನಡೆಯುತ್ತಿವೆ. ಉಪಗ್ರಹದ ಮೂಲಕ ಪತ್ತೆಹುಡುಕಾಡಲು ಇಸ್ರೊಗೂ ಮನವಿ ಮಾಡಲಾಗಿದೆ’ ಎಂದು ಅವರು ಹೇಳಿದರು.
ಪ್ರಕರಣ ಸಂಬಂಧ ಡಿ 22ರಂದು ದೂರು ದಾಖಲಿಸಿಕೊಳ್ಳಲಾಗಿದೆ. ಮೀನುಗಾರರ ಪತ್ತೆಗಾಗಿ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ಗೂಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ, ಈವರೆಗೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ರಾಜ್ಯ ಸರ್ಕಾರದಿಂದ ಸ್ಥಳೀಯ ಮೀನುಗಾರರ ಸಹಕಾರ ಪಡೆದು ಎಲ್ಲ ಬಂದರುಗಳೂ ಸೇರಿದಂತೆ ಅನುಮಾನಾಸ್ಪದ ಸ್ಥಳಗಳಲ್ಲಿ ಪತ್ತೆ ಕಾರ್ಯ ನಡೆಸಲಾಗಿದೆ. ಸಮುದ್ರದಲ್ಲೂ ಹೆಲಿಕಾಪ್ಟರ್ ಮತ್ತುಕರಾವಳಿ ಕಾವಲುಪಡೆಗಳ ಮೂಲಕಪತ್ತೆ ಹಚ್ಚಲುಪ್ರಯತ್ನಿಸಲಾಗಿದೆ ಎಂದರು.
ನೌಕಾದಳವನ್ನು ಬಳಸಿಕೊಳ್ಳುವ ಸಂಬಂಧಈಗಾಗಲೇರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ. ಅಲ್ಲದೆ ಗೂಗಲ್ ಹಾಗೂ ವಿವಿಧ ಉಪಗ್ರಹ ಸಂಸ್ಥೆಗಳ ನೆರವು ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಪಾಕಿಸ್ತಾನದ ಗಡಿ ಪ್ರವೇಶಸಾಧ್ಯತೆಯಿಲ್ಲ: ‘ಗುಜರಾತ್ ಗಡಿದಾಟಿ ಪಾಕಿಸ್ತಾನ ಗಡಿ ಪ್ರವೇಶಿಸುವ ಸಾಧ್ಯತೆ ಕಡಿಮೆ.ದೋಣಿಯಲ್ಲಿ ಅಷ್ಟು ಪ್ರಮಾಣದ ಇಂಧನ ಇರಲಿಲ್ಲ ಎಂದು ಹೇಳಲಾಗಿದೆ. ಈ ಹಿಂದಿನ ಕೆಲವು ಪ್ರಕರಣಗಳ ಆಧಾರದಂತೆ ಬೇರೆ ರಾಜ್ಯಗಳ ಮೀನುಗಾರರು ನಮ್ಮ ಮೀನುಗಾರರನ್ನು ಅಪಹರಿಸಿರುವ ಸಂಶಯವಿದೆ. ಈ ವಿಚಾರದಲ್ಲೂ ನೆರೆ ರಾಜ್ಯಗಳ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಮಾಡಲಾಡಲಾಗುತ್ತಿದೆ’ ಎಂದು ಸಚಿವರು ಹೇಳಿದರು.
‘ವೀನುಗಾರರು ಜೀವಂತವಾಗಿರುತ್ತಾರೆ ಎಂಬ ಅಚಲ ವಿಶ್ವಾಸ ನಮ್ಮ ಸರ್ಕಾರದ್ದು. ಅವರ ಪತ್ತೆಗೆ ಅವಿರತ ಪ್ರಯತ್ನಗಳು ನಡೆದಿದ್ದು, ಶೀಘ್ರವೇ ನಿರೀಕ್ಷಿತ ಫಲಿತಾಂಶಕ್ಕೆಎದುರು ನೋಡುತ್ತಿದ್ದೇವೆ’ ಎಂದು ಅವರು ಹೇಳಿದರು.
ಶಾಸಕ ದಿನಕರ ಶೆಟ್ಟಿ,ಕಾಂಗ್ರೆಸ್ ಮುಖಂಡರಾದ ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಎಸ್ ಪಾಟೀಲ ಹಾಗೂ ವಿವಿಧ ಮುಖಂಡರು ಜತೆಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.