ಬೆಳಗಾವಿ: ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿರುವಐಟಿ ಅಧಿಕಾರಿಗಳು,ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ ಅವರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಗುರುಪಾದ ಕಳ್ಳಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಅವರ ಆಪ್ತ ಎನ್ನಲಾಗಿದ್ದು,ಸವದತ್ತಿ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿರುವ ಅವರ ಮನೆಯಲ್ಲಿ₹ 87ಸಾವಿರ ನಗದು, 200 ಗ್ರಾಂ. ಚಿನ್ನಾಭರಣ ದೊರೆತಿದೆ.
ಸುರೇಶ್ ಅಂಗಡಿ ಸಂಬಂಧಿ ಶಂಕರಗೌಡ ಪಾಟೀಲ ಅವರ ಮನೆಯಲ್ಲೂ ಶೋಧ ನಡೆಸಲಾಗಿದೆ. ಮಾಹಿತಿಯನ್ನು ಶಂಕರಗೌಡ ಪಾಟೀಲರು ಖಚಿತಪಡಿಸಿದ್ದಾರೆ.
‘ಭಾನುವಾರ ರಾತ್ರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾವು ಒಕ್ಕಲುತನ ಮಾಡಿಕೊಂಡು ಜೀವನ ನಡೆಸುತ್ತಿರುವವರು. ನಿನ್ನೆ ರಾತ್ರಿ ಐಟಿ ಅಧಿಕಾರಿಗಳು ಬಂದಾಗ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಪತ್ನಿ ಬಳಿ ಇದ್ದ ₹ 2 ಲಕ್ಷ ರೂಪಾಯಿ ಹಾಗೂ ಮೂವತ್ತು ತೊಲೆ ಒಡವೆ ನೋಡಿ ವಾಪಸ್ ನೀಡಿದ್ದಾರೆ. ನಂತರ ಎಲ್ಲದರ ದಾಖಲೆ ಒದಗಿಸುವಂತೆ ಹೇಳಿಹೋಗಿದ್ದಾರೆ’ ಎಂದು ಪಾಟೀಲ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.