ಬೆಳಗಾವಿ: ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ ಅವರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಗುರುಪಾದ ಕಳ್ಳಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಅವರ ಆಪ್ತ ಎನ್ನಲಾಗಿದ್ದು, ಸವದತ್ತಿ ತಾಲ್ಲೂ ಕಿನ ಹೊಸೂರು ಗ್ರಾಮದಲ್ಲಿರುವ ಅವರ ಮನೆಯಲ್ಲಿ ₹ 87 ಸಾವಿರ ನಗದು, 200 ಗ್ರಾಂ ಚಿನ್ನಾಭರಣ ದೊರೆತಿದೆ.
ಸುರೇಶ್ ಅಂಗಡಿ ಸಂಬಂಧಿ ಶಂಕರಗೌಡ ಪಾಟೀಲ ಅವರ ಮನೆಯಲ್ಲೂ ಶೋಧ ನಡೆಸಲಾಗಿದೆ.
‘ಭಾನುವಾರ ರಾತ್ರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾವು ಕೃಷಿ ಮಾಡಿ ಜೀವನ ನಡೆಸುತ್ತಿರುವವರು. ನಿನ್ನೆ ರಾತ್ರಿ ಐಟಿ ಅಧಿಕಾರಿಗಳು ಬಂದಾಗ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಪತ್ನಿ ಬಳಿ ಇದ್ದ ₹ 2 ಲಕ್ಷ ರೂಪಾಯಿ ಹಾಗೂ ಮೂವತ್ತು ತೊಲೆ ಒಡವೆ ನೋಡಿ ವಾಪಸ್ ನೀಡಿದ್ದಾರೆ’ ಎಂದು ಪಾಟೀಲ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ಪರಿಶೀಲನೆ ನಡೆಸಿದ ನಂತರ ಎಲ್ಲದರ ದಾಖಲೆ ಒದಗಿಸುವಂತೆ ಅಧಿಕಾರಿಗಳು ಹೇಳಿ ಹೋಗಿದ್ದಾರೆ’ ಎಂದು ತಿಳಿಸಿದರು.