ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬನಿ ಮಿಡಿದ ಭಕ್ತ ಸಮೂಹ: ಬದುಕಲು ಕಲಿಸಿದ ಜಗದಾತ್ಮಾನಂದಜಿಗೆ ವಿದಾಯ

Last Updated 16 ನವೆಂಬರ್ 2018, 13:19 IST
ಅಕ್ಷರ ಗಾತ್ರ

ಪೊನ್ನಂಪೇಟೆ (ಕೊಡಗು ಜಿಲ್ಲೆ): ಅಲ್ಲಿ ಮೌನ ನೆಲೆಸಿತ್ತು. ಎಲ್ಲರ ಕಣ್ಣಾಲಿಗಳೂ ತೇವಗೊಂಡಿದ್ದವು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ರಾಮಕೃಷ್ಣ ಆಶ್ರಮದ ಭಕ್ತರು, ಅಭಿಮಾನಿಗಳ ಮಡುಗಟ್ಟಿದ ಶೋಕದ ನಡುವೆ ಬದುಕಲು ಕಲಿಸಿದ ಸ್ವಾಮಿ ಜಗದಾತ್ಮಾನಂದಜಿ (89) ಅವರಿಗೆ ಶುಕ್ರವಾರ ಸಂಜೆ ವಿದಾಯ ಹೇಳಲಾಯಿತು.

ಗುರುವಾರ ರಾತ್ರಿ ಮೈಸೂರಿನಲ್ಲಿ ನಿಧನರಾಗಿದ್ದ ಜಗದಾತ್ಮಾನಂದಜಿ ಅವರ ಪಾರ್ಥಿವ ಶರೀರವನ್ನು ಶುಕ್ರವಾರ ಮಧ್ಯಾಹ್ನ ಪೊನ್ನಂಪೇಟೆ ಆಶ್ರಮಕ್ಕೆ ತರಲಾಯಿತು. ಅದಕ್ಕೂ ಮೊದಲು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಪೊನ್ನಂಪೇಟೆ ಆಶ್ರಮಕ್ಕೆ ಬಂದಿದ್ದ ಅಪಾರ ಸಂಖ್ಯೆ ಭಕ್ತರು ಸರದಿಯಲ್ಲಿ ಬಂದು ಪುಷ್ಪಗುಚ್ಛವಿಟ್ಟು ದರ್ಶನ ಪಡೆದರು. ಆಶ್ರಮದಲ್ಲಿದ್ದ ಸನ್ಯಾಸಿಗಳು ಆತ್ಮಕ್ಕೆ ಶಾಂತಿ ಕೋರಿದರು.

ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಜಗದಾತ್ಮಾನಂದಜಿ ಅವರ ಪಾರ್ಥಿವ ಶರೀರದ ಮೆರವಣಿಗೆ ಪೊನ್ನಂಪೇಟೆಯಲ್ಲಿ ನಡೆಯಿತು. ಬಳಿಕ ಹಿಂದೂ ರುದ್ರಭೂಮಿಯಲ್ಲಿ ಪಾರ್ಥಿವ ಶರೀರ ಅಗ್ನಿ ಲೀನವಾಯಿತು.

ಆಶ್ರಮದ ಅವರ ವಿಶ್ರಾಂತಿ ಕೋಣೆಯಲ್ಲಿ ನೀರವ ಮೌನ ಆವರಿಸಿತ್ತು. ಇಳಿವಯಸ್ಸಿನಲ್ಲೂ ಸದಾ ಲವಲವಿಕೆಯಿಂದ ಸ್ವಾಮಿ ಇರುತ್ತಿದ್ದರು. ತಂಬೂರಿ, ವೀಣೆ, ಪುಸ್ತಕ ಹಾಗೂ ಕುರ್ಚಿ ಅನಾಥವಾಗಿ ಬಿದ್ದಿದ್ದನ್ನು ಕಂಡಭಕ್ತರು ಮರುಗಿದರು.

ಬುಡಕಟ್ಟು ಜನಾಂಗದ ಶ್ರೇಯೋಭಿವೃದ್ಧಿ: ಕೊಡಗು ಜಿಲ್ಲೆಯ ದಕ್ಷಿಣ ಭಾಗದಲ್ಲಿ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ. 2000ದಲ್ಲಿ ಪೊನ್ನಂಪೇಟೆ ಆಶ್ರಮಕ್ಕೆ ಬಂದ ಸ್ವಾಮಿ ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗೆ ಮಿಡಿದಿದ್ದರು. ಜೀವನಮಟ್ಟ ಸುಧಾರಿಸಲು ಹಲವು ಕಾರ್ಯಕ್ರಮಗಳನ್ನೂ ರೂಪಿಸಿದ್ದರು. ಇವರ ಅವಧಿಯಲ್ಲಿ ರಾಮಕೃಷ್ಣ ಆಶ್ರಮದ ‘ಏಕತಾ ಮಂದಿರ’ (2009) ಲೋಕಾರ್ಪಣೆಗೊಂಡಿತ್ತು.

ಅವರ ‘ಬದುಕಲಿ ಕಲಿಯಿರಿ’ ಪುಸ್ತಕವು ನಾಡಿನಾದ್ಯಂತ ಮನೆಮಾತಾಗಿದೆ. ಮಡಿಕೇರಿ ಆಕಾಶವಾಣಿಯಲ್ಲಿ ಈ ಪುಸ್ತಕ ಕುರಿತು ನಿರಂತರ ಒಂದು ವರ್ಷಗಳ ಕಾರ್ಯಕ್ರಮ ಪ್ರಸಾರವಾಗಿತ್ತು. ಇದು ಯುವಕರಿಗೆ ಪ್ರೇರಣೆ ನೀಡಿತ್ತು. ನುಡಿದಂತೆಯೇ ಸ್ವಾಮಿ ನಡೆದುಕೊಂಡಿದ್ದರು ಎಂದು ಭಕ್ತರು ಸ್ಮರಿಸಿದರು.

ಮೈಸೂರಿನಲ್ಲಿದ್ದಾಗ ರಾಮಕೃಷ್ಣ ವಿದ್ಯಾಶಾಲೆಯ ಕ್ಷೇಮಪಾಲಕರಾಗಿ, ಶಾಲೆ ಹಾಗೂ ಆಸ್ಪತ್ರೆ ಮೇಲ್ವಿಚಾರಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು.

ಭಗವದ್ಗೀತೆ, ಉಪನಿಷತ್ತುಗಳು, ರಾಮಕೃಷ್ಣ- ವಿವೇಕಾನಂದ ವೇದಾಂತ ಸಾಹಿತ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ವಿದ್ವಾಂಸರಾಗಿದ್ದರು. ವಾಗ್ಮಿಯ ಜೊತೆಗೆ ಅತ್ಯುತ್ತಮ ಲೇಖಕರು. ಅವರ ಸುಪ್ರಸಿದ್ಧ ಕನ್ನಡ ಗ್ರಂಥ ‘ಬದುಕಲು ಕಲಿಯಿರಿ’ ಅನೇಕ ಮರು ಮುದ್ರಣ ಕಂಡಿದೆ. ಇಂಗ್ಲಿಷ್ ಆವೃತ್ತಿ ‘Learn to Live' ಸಿಂಗಪೂರದಿಂದ ಪ್ರಕಟಗೊಂಡಿತ್ತು. ಅವರ ಸಾಹಿತ್ಯ ಸೇವೆ ಪರಿಗಣಿಸಿ 2004ರಲ್ಲಿ ಆರ್ಯ ಪ್ರಶಸ್ತಿಯ ಗೌರವ ಲಭಿಸಿದೆ.

ಜಗದಾತ್ಮಾನಂದಜಿ ಅವರು ಸ್ಫೂರ್ತಿದಾಯಕ ಉಪನ್ಯಾಸ ನೀಡುತ್ತಿದ್ದರು. 2000ದಿಂದ 2010ರ ತನಕ ಪೊನ್ನಂಪೇಟೆ ಆಶ್ರಮದ ಮುಖ್ಯಸ್ಥರಾಗಿದ್ದರು. ಬಳಿಕ ಅದೇ ಆಶ್ರಮದಲ್ಲಿ ವಿಶ್ರಾಂತಿ ಜೀವನ ಸಾಗಿಸುತ್ತಿದ್ದರು. ವಿಶ್ರಾಂತಿ ಜೀವನದಲ್ಲೂ ವಾರಕ್ಕೊಮ್ಮೆ ಉಪನ್ಯಾಸ ನೀಡುತ್ತಿದ್ದರು.

ಆಸ್ಟ್ರೇಲಿಯ, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾದಲ್ಲೂ ಆಧ್ಯಾತ್ಮಿಕ ಜ್ಞಾನ ಪ್ರಸಾರ ಮಾಡಿದ್ದಾರೆ. ಒಂದು ತಿಂಗಳಿಂದ ಆಸ್ಪತ್ರೆಯಲ್ಲಿದ್ದ ಜಗದಾತ್ಮಾನಂದಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿಲ್ಲ. ಭಕ್ತರ ಪ್ರಾರ್ಥನೆಯೂ ಫಲಿಸಲಿಲ್ಲ. ಸದಾ ಆನಂದಲ್ಲಿದ್ದ ರಾಮಕೃಷ್ಣ ಆಶ್ರಮದ ಭಕ್ತರಲ್ಲಿ ದುಃಖದ ಕಾರ್ಮೋಡ ಕವಿದಿದೆ.

ಸನ್ಯಾಸದ ಬಳಿಕ ಒಮ್ಮೆ ಮಾತ್ರ ಊರಿಗೆ ತೆರಳಿದ್ದರು:ಉಡುಪಿ ಜಿಲ್ಲೆಯ ಬಾಳೆಕುಂದೂರು ಗ್ರಾಮದ ನಿವಾಸಿ ಶ್ರೀನಿವಾಸ್‌ ಹಾಗೂ ಶ್ರೀದೇವಿ ದಂಪತಿ 6 ಮಕ್ಕಳಲ್ಲಿ ಹಿರಿಯ ಪುತ್ರ ಸ್ವಾಮಿ ಜಗದಾತ್ಮಾನಂದಜಿ. ಪೂರ್ವಾಶ್ರಮದ ಹೆಸರು ಹೆಸರು ಲಕ್ಷ್ಮಿನಾರಾಯಣ.

ಆರಂಭದಲ್ಲಿ ಬಾಳೆಕುಂದೂರು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 31ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಸ್ಕೀಕರಿಸಿದ್ದರು. 13 ವರ್ಷದಲ್ಲಿದ್ದಾಗ ತಾಯಿ ಮರಣವನ್ನಪ್ಪುತ್ತಾರೆ. ಬಳಿಕ ತಂದೆ ಆಶ್ರಯದಲ್ಲಿ ಬೆಳೆಯುತ್ತಾರೆ. ಬಾಲ್ಯದಲ್ಲಿ ವಿವೇಕಾನಂದರ ಪ್ರಭಾವಕ್ಕೆ ಒಳಗಾಗಿದ್ದರು. 1960ರಲ್ಲಿ ಬೆಂಗಳೂರು ರಾಮಕೃಷ್ಣ ಶಾಖೆ ಸೇರಿ ಸ್ವಾಮಿ ಯತೀಶ್ವರಾನಂದಜಿ ಅವರಲ್ಲಿ ಮಂತ್ರದೀಕ್ಷೆ, ವೀರೇಶ್ವರಾನಂದಜಿ ಅವರಿಂದ ಸನ್ಯಾಸ ಸ್ವೀಕರಿಸಿದ್ದರು.

ಸನ್ಯಾಸಿಯಾದ ಬಳಿಕ ತಂದೆಯ ಆರೋಗ್ಯ ವಿಚಾರಿಸಲು ಒಮ್ಮೆ ಮಾತ್ರ ಗ್ರಾಮಕ್ಕೆ ಬಂದಿದ್ದರು ಎಂದು ಪೂರ್ವಾಶ್ರಮದ ಕುಟುಂಬಸ್ಥರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT