ಮಂಗಳೂರು: ಕರ್ನಾಟಕವು ದೇಶದಲ್ಲೇ ಅತ್ಯಧಿಕ ಕನಿಷ್ಠ ವೇತನ ಹೊಂದಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಕೈಗಾರಿಕೋದ್ಯಮಿಗಳು ಅಳಲು ತೋಡಿಕೊಂಡಿದ್ದಾರೆ. ಈ ಕಾರಣದಿಂದ ಉದ್ಯಮಿಗಳು ಮತ್ತು ಕಾರ್ಮಿಕರು ಇಬ್ಬರಿಗೂ ಹೊರೆಯಾಗದಂತೆ ಕನಿಷ್ಠ ವೇತನ ಪರಿಷ್ಕರಣೆಗೆ ಸೂಚಿಸಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿ ಕುರಿತು ಕೈಗಾರಿಕೋದ್ಯಮಿಗಳೊಂದಿಗೆ ಶನಿವಾರ ನಡೆಸಿದ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ‘ಕೈಗಾರಿಕೆಗಳೂ ಉಳಿಯಬೇಕು, ಕಾರ್ಮಿಕರಿಗೂ ಅನುಕೂಲ ಆಗಬೇಕು. ಆ ರೀತಿಯಲ್ಲಿ ದರ ಪರಿಷ್ಕರಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.
ತೆರಿಗೆ ಪರಿಷ್ಕರಣೆ: ಕೈಗಾರಿಕೆಗಳಿಗೆ ಸ್ಥಳೀಯ ಸಂಸ್ಥೆಗಳು ವಿಧಿಸುವ ತೆರಿಗೆಯ ದರವನ್ನೂ ಪರಿಷ್ಕರಣೆ ಮಾಡಲಾಗುವುದು. ವಸತಿ ಕಟ್ಟಡಗಳು ಮತ್ತು ವಾಣಿಜ್ಯ ಕಟ್ಟಡಗಳೆಂದು ವಿಭಜಿಸಿ ತೆರಿಗೆ ವಿಧಿಸಲಾಗುತ್ತಿದೆ. ಕೈಗಾರಿಕೆಗಳನ್ನು ವಾಣಿಜ್ಯ ಕಟ್ಟಡಗಳ ವ್ಯಾಪ್ತಿಯಲ್ಲಿರಿಸಲಾಗಿದೆ. ಈ ಎರಡೂ ವರ್ಗದ ಹೊರತಾಗಿ ಕೈಗಾರಿಕೆಗಳಿಗೆ ಹೊಸ ತೆರಿಗೆ ದರ ನಿಗದಿ ಮಾಡಲಾಗುವುದು. ಪ್ರಸಕ್ತ ಬಜೆಟ್ನಲ್ಲೇ ಈ ಘೋಷಣೆ ಹೊರಬೀಳಲಿದೆ ಎಂದು ಶೆಟ್ಟರ್ ಹೇಳಿದರು.