ಮಂಗಳೂರು: ‘ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಅಂಟಿದ ಶನಿ. ಅವರು ಪಕ್ಷವನ್ನು ಮುಗಿಸಿಯೇ ಹೋಗುವುದು. ಅವರಿಗೆ ಹೆಚ್ಚು ಅಧಿಕಾರ ಕೊಡುವುದೇ ತಪ್ಪು. ಹೈಕಮಾಂಡ್ ಈ ತಪ್ಪನ್ನು ಮಾಡುತ್ತಿದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಿಗೆ ಅಧಿಕಾರ ಕೊಡುತ್ತಿರುವುದು ತಪ್ಪು ಎಂಬುದನ್ನು ಹೈಕಮಾಂಡ್ಗೂ ತಿಳಿಸಿದ್ದೇನೆ. ಈ ಹೇಳಿಕೆ ಬಗ್ಗೆ ನನ್ನ ವಿರುದ್ಧ ದೂರು ನೀಡಲಿ. ಪಕ್ಷದಿಂದ ತೆಗೆದು ಹಾಕಲಿ. ನಾನು ಯಾರೆಂದು ತೋರಿಸುತ್ತೇನೆ’ ಎಂದು ಸವಾಲು ಹಾಕಿದರು.
‘ಪಾಲಿಕೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಕರೆದರೂ ನಾನು ಹೋಗುವುದಿಲ್ಲ. ಅವರು ಏನು ಹೇಳುತ್ತಾರೆ ನೋಡೋಣ, ಮರುದಿನ ನಾನು ಮಾತನಾಡುತ್ತೇನೆ’ ಎಂದು ಪೂಜಾರಿ ಹೇಳಿದರು.
‘ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಪಕ್ಷದ ಹಿರಿಯರನ್ನು ಕಡೆಗಣಿಸಿದ್ದರಿಂದಲೇ ಕರಾವಳಿಯಲ್ಲಿ ಕಾಂಗ್ರೆಸ್ ಸೋಲುವಂತಾಗಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಅದೇ ತಪ್ಪು ಮಾಡಲಾಗುತ್ತಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಹೇಳಿದರು.