ಬೆಂಗಳೂರು: ದೇಶದಲ್ಲಿ ಇಂದು ಯಾವ ರಾಜಕೀಯ ಪಕ್ಷದಲ್ಲೂ ನೈತಿಕತೆ ಉಳಿದಿಲ್ಲ. ಅದರ ಫಲವಾಗಿಯೇ ಮಹಾರಾಷ್ಟ್ರದಲ್ಲಿ ಪರಸ್ಪರ ವಿರೋಧ ಸಿದ್ಧಾಂತ ಹೊಂದಿರುವ ಪಕ್ಷಗಳಿಂದ ಸರ್ಕಾರ ರಚನೆಯಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಶನಿವಾರ ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿದ ಬಳಿಕ ಯಶವಂತಪುರ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳುವ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿ, ತಮ್ಮ ಪಕ್ಷ ಜೆಡಿಎಸ್ ಅನ್ನೂ ಸೇರಿಸಿಕೊಂಡೇ ಯಾರಲ್ಲೂ ನೈತಿಕತೆ ಉಳಿದಿಲ್ಲ ಎಂದು ಹೇಳುತ್ತಿರುವುದಾಗಿ ತಿಳಿಸಿದರು.
ಜಿತ್ ಪವಾರ್, ಶರದ್ ಪವಾರ್ ವಿರುದ್ಧ ಸೊಸೈಟಿಗಳಿಗೆ ಸಾವಿರಾರು ಕೋಟಿ ಮೋಸ ಮಾಡಿದ ಆರೋಪಗಳಿವೆ. ಈ ಸಂಬಂಧ ಇ.ಡಿ. ನೋಟಿಸ್ ಸಹ ಜಾರಿಯಾಗಿದೆ. ಆದರೆ ಬಿಜೆಪಿ -ಎನ್ಸಿಪಿ ಮೈತ್ರಿ ಸರ್ಕಾರ ಬಂದ ಕಾರಣ ಇನ್ನು ಈ ಹಗರಣದ ತನಿಖೆ ನಡೆಯುತ್ತದೆಯೇ ಎಂದು ಪ್ರಶ್ನಿಸಿದರು.
ಯಾರಿಗೂ ಬೆಂಬಲ ಇಲ್ಲ: ಜೆಡಿಎಸ್ ನಿಲುವು ಅಸ್ಪಷ್ಟವಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷ ಕಾಂಗ್ರೆಸ್ಗೂ ಬೆಂಬಲ ನೀಡುವುದಿಲ್ಲ, ಬಿಜೆಪಿಗೂ ಬೆಂಬಲ ಕೊಡುವುದಿಲ್ಲ. ಜನರ ಒಳಿತೇ ಪಕ್ಷದ ಗುರಿ ಎಂದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಶನಿವಾರ ಬೆಂಗಳೂರಿನಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸುದೀರ್ಘಚರ್ಚೆ ನಡೆಸಿದರು.