ಬೆಂಗಳೂರು: ರಾಜ್ಯ ಹೈಕೋರ್ಟ್ನ ನ್ಯಾಯಮೂರ್ತಿ ಹುದ್ದೆಗೆ 12 ವಕೀಲರ ಹೆಸರುಗಳನ್ನು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದಲ್ಲಿ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ಹಾಗೂ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನು ಒಳಗೊಂಡ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಇದೇ 3ರಂದು ಶಿಫಾರಸು ಮಾಡಿದೆ.
ಎಂಟು ಹೊಸ ವಕೀಲರ ಹೆಸರು: ನೇರನಹಳ್ಳಿ ಶ್ರೀನಿವಾಸನ್ ಸಂಜಯಗೌಡ, ಮೂಲಿಮನಿ ಜ್ಯೋತಿ, ರಂಗಸ್ವಾಮಿ ನಟರಾಜ್, ನಾಗೇಂದ್ರ ರಾಮಚಂದ್ರ ನಾಯಕ್, ಚಂದನಗೌಡರ ಹೇಮಂತ, ರವಿ ವೆಂಕಪ್ಪ ಹೊಸಮನಿ, ಪ್ರದೀಪ್ ಸಿಂಗ್ ಯೆರೂರು ಮತ್ತು ಮಹೇಶನ್ ನಾಗಪ್ರಸನ್ನ.
ಈ ಹಿಂದೆ ಶಿಫಾರಸು ಮಾಡಲಾದ ಪಟ್ಟಿಯಲ್ಲಿ ವಾಪಸು ಕಳುಹಿಸಲಾಗಿದ್ದ ನಾಲ್ವರು ವಕೀಲರ ಹೆಸರನ್ನು ಮರು ಪರಿಶೀಲಿಸುವಂತೆಯೂ ಇದೇ ಕೊಲಿಜಿಯಂ ಕೇಂದ್ರಕ್ಕೆ ಕೋರಿದೆ. ಇದರಿಂದಾಗಿ ಒಟ್ಟು 12 ವಕೀಲರ ಹೆಸರುಗಳು ಈಗ ಕೇಂದ್ರದ ಮುಂದಿವೆ.
ಮರು ಪರಿಶೀಲನೆಗೆ ಕೋರಲಾದ ಹೆಸರುಗಳು: ಸವಣೂರು ವಿಶ್ವಜಿತ್ ಶೆಟ್ಟಿ, ಮರಳೂರು ಇಂದ್ರಕುಮಾರ್ ಅರುಣ್, ಮೊಹಮದ್ ಗೌಸ್ ಶುಕೂರೆ ಕಮಲ್ ಮತ್ತು ಇಂಗಳಗುಪ್ಪೆ ಸೀತಾರಾಮಯ್ಯ ಇಂದಿರೇಶ್.
ಕರ್ನಾಟಕ ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳ ಸಂಖ್ಯೆ 62. ಸದ್ಯ 34 ಮಂದಿ ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.