ಚಿಂತಾಮಣಿ: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಯೋಗಿನಾರೇಯಣ ಯತೀಂದ್ರ ಮಠದಲ್ಲಿ ಜು.14ರಿಂದ 16ರವರೆಗೆ ರಾಷ್ಟ್ರೀಯ ಸಂಗೀತೋತ್ಸವ ನಡೆಯಲಿದೆ.
ನಿರಂತರ 72 ಗಂಟೆ ಕೈವಾರದಲ್ಲಿ ನಾದಸುಧೆ ಹರಿಯಲಿದೆ. ಸ್ಥಳೀಯ ತಂಡಗಳು, ರಾಜ್ಯದ ಪ್ರಸಿದ್ಧ ಸಂಗೀತಗಾರರು, ತಮಿಳುನಾಡು, ಆಂಧ್ರಪ್ರದೇಶ, ನವದೆಹಲಿ, ಮಹಾರಾಷ್ಟ್ರ ಹಾಗೂ ಶ್ರೀಲಂಕಾ ದೇಶದ ಸಂಗೀತಗಾರರು ಕಛೇರಿ ನೀಡುವರು.
14ರಂದು ಮಠದ ಧರ್ಮಾಧಿಕಾರಿ ಎಂ.ಆರ್.ಜಯರಾಂ ನೇತೃತ್ವದ ತಂಡ ತಾತಯ್ಯನವರ ಕೀರ್ತನೆಗಳನ್ನು ಹಾಡುವ ಮೂಲಕ ಸಂಗೀತೋತ್ಸವಕ್ಕೆ ಚಾಲನೆ ನೀಡಲಿದೆ.
ಯೋಗಿನಾರೇಯಣ ಟ್ರಸ್ಟ್ 20 ವರ್ಷಗಳಿಂದ ಈ ನಿರಂತರ ಸಂಗೀತೋತ್ಸವ ನಡೆಸಿಕೊಂಡು ಬರುತ್ತಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ತಂಡಗಳಿಗೆ ತಲಾ 15 ನಿಮಿಷ ಕಾರ್ಯಕ್ರಮ ನೀಡಲು ಅವಕಾಶ ಇದೆ. ಸಂಜೆ 5ರ ನಂತರ ಪ್ರಸಿದ್ಧರು ಕಛೇರಿ ನಡೆಸಿಕೊಡುವರು. ರಾತ್ರಿಪೂರ್ತಿ ತತ್ವಪದ, ಭಜನೆ ಜರುಗಲಿದೆ.
ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು ಸಂಗೀತಾಸಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎನ್ನುವರು ಕಾರ್ಯಕ್ರಮ ಸಂಘಟಕರು.