ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಬುರ್ಗಿ ಹತ್ಯೆ: ನಾಲ್ಕು ತಿಂಗಳ ಮೊದಲೇ ಬೈಕ್‌ ಕಳವು

Last Updated 7 ಜೂನ್ 2019, 19:32 IST
ಅಕ್ಷರ ಗಾತ್ರ

ಧಾರವಾಡ: ಹಿರಿಯ ವಿಚಾರವಾದಿ ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆಗೆ ಹಂತಕರು ಬಳಸಿದ್ದು ಕದ್ದ ಬೈಕ್. ಅದೂ, ಜಿಲ್ಲೆಯ ನವಲಗುಂದ ತಾಲ್ಲೂಕಿನ ದೊಡ್ಡ ಮೊರಬದ್ದು ಎಂಬ ಕೌತುಕದ ವಿಷಯ ತನಿಖೆಯಿಂದ ತಿಳಿದುಬಂದಿದೆ.

ಖಾಸಗಿ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುವ ಕರೀಂಸಾಬ್‌ ಎಂಬುವವರಿಗೆ ಸೇರಿದ್ದ ಈ ಬೈಕ್, ಡಾ. ಕಲಬುರ್ಗಿ ಅವರ ಹತ್ಯೆಗೆ ನಾಲ್ಕು ತಿಂಗಳು ಮೊದಲು (2015ರ ಮೇ 3) ಹಂತಕರು ಕಳ್ಳತನ ಮಾಡುವ ಮೂಲಕ ಬಲವಾದ ಯೋಜನೆ ರೂಪಿಸಿದ್ದರು. ಕದ್ದ ಬೈಕ್ ಅನ್ನು ಆರೋಪಿ ಗಣೇಶ ಮಿಸ್ಕಿನ್‌ ತನ್ನ ಬಳಿ ಇರಿಸಿಕೊಂಡಿದ್ದ. ನಂತರ ಅದನ್ನು ಕಿತ್ತೂರಿನಲ್ಲಿ ಬಿಟ್ಟು ಪರಾರಿಯಾಗಿದ್ದ ಎಂಬ ಅಂಶ ತನಿಖೆಯಿಂದ ಗೊತ್ತಾಗಿರುವುದಾಗಿ ಮೂಲಗಳು ತಿಳಿಸಿವೆ.

ಕಳ್ಳತನವಾಗಿ, ಹತ್ಯೆಗೆ ಬಳಕೆಯಾಗಿದ್ದ ಬಜಾಜ್ ಡಿಸ್ಕವರಿ 125ಸಿಸಿ ಬೈಕ್‌ ನಂತರ ಪತ್ತೆಯಾಗಿದ್ದು ಮಹಾರಾಷ್ಟ್ರದ ವಾಸುದೇವ ಸೂರ್ಯವಂಶಿ ಎಂಬ ಮೆಕ್ಯಾನಿಕ್ ಬಳಿ. ಇದರ ನೋಂದಣಿ ಸಂಖ್ಯೆ ಫಲಕ ಬದಲಿಸಲಾಗಿತ್ತು. ನಂತರ ತನಿಖೆಯಿಂದ ಈ ಬೈಕ್‌ನ ಅಸಲಿ ನೋಂದಣಿ ಸಂಖ್ಯೆ ಮತ್ತು ಮಾಲೀಕರನ್ನು ಪೊಲೀಸರು ಪತ್ತೆ ಮಾಡಿದ್ದರು.

ಆದರೆ ಕಳುವಾಗುವ ಮೊದಲು ಬೈಕ್ ಅನ್ನು ಕರೀಂಸಾಬ್‌ ಅವರು ತಮ್ಮ ಭಾವ ಬುಡ್ಡೇಸಾಬ್ಅಲ್ಲಿಪಿನ್ನಿ ಅವರಿಗೆ ನೀಡಿದ್ದರು. ಬುಡ್ಡೇಸಾಬ್‌ ಅದನ್ನು ಸಂಬಂಧಿಕರ ಮದುವೆಗೆಂದು ಹುಬ್ಬಳ್ಳಿ ತಾಲ್ಲೂಕಿನ ಮಾವನೂರಿಗೆ ತೆಗೆದುಕೊಂಡು ಹೋಗಿದ್ದರು. ಆಗ ಅಲ್ಲೇ ಒಂದು ತೋಟ ನೋಡಲು ಹೋಗಿದ್ದಾಗ ಬೈಕ್ ನಾಪತ್ತೆಯಾಗಿತ್ತು. ಆದರೆ ಈ ಕುರಿತು ದೂರು ದಾಖಲಾಗಿದ್ದು2018ರ ಮೇ 3ರಂದು.

ಈ ಕುರಿತು ಬುಡ್ಡೇಸಾಬ್‌ ಪ್ರತಿಕ್ರಿಯಿಸಿ, ‘ಬೈಕ್ ಕಳೆದುಹೋದ ಒಂದೂವರೆ ಗಂಟೆಯಲ್ಲೇ ಠಾಣೆಗೆ ಹೋಗಿ ದೂರು ನೀಡಿದ್ದೆವು. ಎಫ್‌ಐಆರ್‌ ಆಗ ಮಾಡಿರಲಿಲ್ಲ. ವಿಚಾರಣೆ ನಡೆಸಿ ತಿಳಿಸಲಾಗುವುದು ಎಂದಷ್ಟೇ ಪೊಲೀಸರು ಹೇಳಿದರು. ಈ ನಡುವೆ ನಮ್ಮ ಭಾವ ತೀರಿಕೊಂಡರು. ಹೀಗಾಗಿ ನಾವೂ ಬೈಕ್ ವಿಷಯವನ್ನು ಅಲ್ಲಿಗೇ ಕೈಬಿಟ್ಟೆವು. ಆದರೆ ಮೂರು ವರ್ಷ ನಂತರ ಬಂದ ಬೆಂಗಳೂರಿನ ಪೊಲೀಸರು, ಬೈಕ್ ಸಿಕ್ಕಿದೆ ಎಂದು ನಮ್ಮನ್ನು ಸ್ಥಳಕ್ಕೆ ಕರೆದೊಯ್ದು ಸ್ಥಳ ಪರಿಶೀಲನೆ ಮತ್ತು ವಿಚಾರಣೆ ನಡೆಸಿದರು. ಕಳುವಾದ ದಿನ ಮದುವೆ ಇತ್ತೇ ಎಂದು ಲಗ್ನಪತ್ರಿಕೆ ಪಡೆದು ಪರಿಶೀಲಿಸಿದರು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT