ಕಕ್ಕೇರಾ (ಯಾದಗಿರಿ ಜಿಲ್ಲೆ): ಹುಣಸಿಹೊಳೆಯ ಕಣ್ವ ಮಠ ನೂತನ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವ ಶುಕ್ರವಾರ ನಡೆಯಿತು. ನೂತನ ಶ್ರೀಗಳಾದ ರವೀಂದ್ರಾಚಾರ್ಯ ಜೋಶಿ ಅವರಿಗೆ ವಿದ್ಯಾ ಕಣ್ವ ವಿರಾಜ ತೀರ್ಥರು ಎಂದು ನಾಮಕರಣ ಮಾಡಲಾಯಿತು. ಶ್ರೀಗಳು ಗೃಹಸ್ಥಾಶ್ರಮ ತ್ಯಾಗ ಮಾಡಿ ಸನ್ಯಾಸ ದೀಕ್ಷೆ ಪಡೆದರು.
ಕಣ್ವ ಮಠದ ಸಭಾಂಗಣದಲ್ಲಿ ವಿದ್ಯಾವಾರಿಧಿ ಶ್ರೀಗಳು ಪುಷ್ಪಾರ್ಚನೆ ಮಾಡುವ ಮೂಲಕ ಪಟ್ಟಾಭಿಷೇಕ ನೆರವೇರಿಸಿದರು. ದಂಡೋಕ ಪ್ರದಾನ ಮಾಡಿದ ಬಳಿಕ ನೂತನ ಶ್ರೀಗಳಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.
ಈ ಸಂದರ್ಭದಲ್ಲಿ ವಿದ್ಯಾ ಕಣ್ವ ವಿರಾಜ ತೀರ್ಥರು ಮಾತನಾಡಿ, ‘ಕಣ್ವಮಠವು ಮಾಧವತೀರ್ಥ ಶ್ರೀಪಾದಂಗಳವರಿಂದ ಸ್ಥಾಪಿತಗೊಂಡು ಅಪಾರ ಭಕ್ತರ ಮನ್ನಣೆ ಗಳಿಸಿದೆ. ಧರ್ಮ ಸಂಪನ್ನತೆ ಹೊಂದಿ ಭಕ್ತಿ–ಶ್ರದ್ಧೆಗಳೊಂದಿಗೆ ಸರ್ವಶಕ್ತಗೊಳ್ಳುವುದು ಮಾನವನ ಧ್ಯೇಯವಾಗಿದೆ.
ದೇಶದಾದ್ಯಂತ ಇರುವ ಕಣ್ವ ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಠದ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು’ ಎಂದರು. ಯಲಹಂಕದ ಕಣ್ವಮಠ ಆಡಳಿತ ಮಂಡಳಿ ಟ್ರಸ್ಟ್, ಹುಣಸಿಹೊಳೆ ಕಣ್ವಮಠದ ಅಭಿವೃದ್ಧಿ ಮಂಡಳಿ ಟ್ರಸ್ಟ್ ಪದಾಧಿಕಾರಿಗಳು ಮತ್ತು ಭಕ್ತರು ಇದ್ದರು.