ಕಾರವಾರ: ಎಂಜಿನ್ ವೈಫಲ್ಯದಿಂದ ಇಲ್ಲಿನ ಕೂರ್ಮಗಡ ನಡುಗಡ್ಡೆ ಬಳಿ ಸಮುದ್ರದಲ್ಲಿ ಬಾಕಿಯಾಗಿದ್ದ ಮೀನುಗಾರಿಕಾ ದೋಣಿಯಲ್ಲಿದ್ದ ಮೀನುಗಾರರನ್ನು ಭಾರತೀಯ ನೌಕಾದಳ ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ಶನಿವಾರ ರಕ್ಷಣೆ ಮಾಡಿದರು.
ದೋಣಿಯು ಶುಕ್ರವಾರ ಸಂಜೆ ಪ್ರಕ್ಷುಬ್ಧ ಸಮುದ್ರದಲ್ಲಿ ಸಿಲುಕಿಕೊಂಡಿತ್ತು. ಮಲ್ಪೆಯಿಂದ ಹೊರಟಿದ್ದ 'ರಾಜಕಿರಣ್' ಹೆಸರಿನ ಈ ದೋಣಿಯಲ್ಲಿ 9 ಮೀನುಗಾರರಿದ್ದರು. ಎಲ್ಲರನ್ನೂ ರಕ್ಷಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಈ ಕಾರ್ಯಾಚರಣೆಯ ಬಳಿಕ ರಕ್ಷಣಾ ತಂಡವು ಕಾರವಾರದ ದಕ್ಷಿಣ ಭಾಗದ ಕಡಲಿನಲ್ಲಿ ಬಾಕಿಯಾಗಿರುವ 'ಎಂ.ಎ.ಮಹೀಲ್' ಎಂಬ ದೋಣಿಯ ರಕ್ಷಣೆಗೆ ತೆರಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.