ರಾಮನಗರ:ಕ್ಷೇತ್ರದಲ್ಲಿನ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರು ತಮ್ಮ ಏಜೆಂಟರನ್ನು ಹಿಂಪಡೆದ ಕಾರಣ ಬಿಜೆಪಿಯ ಎಲ್ಲ ಚುನಾವಣಾ ಏಜೆಂಟರ ಮಾನ್ಯತೆಗಳು ರದ್ದಾಗಿವೆ. ಹೀಗಾಗಿ ಯಾವ ಮತಗಟ್ಟೆಯಲ್ಲೂ ಪಕ್ಷದ ಏಜೆಂಟರನ್ನು ಒಳಬಿಟ್ಟಿಲ್ಲ.
ಚಂದ್ರಶೇಖರ್ ಅವರು ಚುನಾವಣಾ ಅಧಿಕಾರಿಗೆ ನಮೂನೆ -9 ಪತ್ರ ನೀಡಿ ತಮ್ಮ ಚುನಾವಣಾ ಏಜೆಂಟರಾದ ಪದ್ಮನಾಭ್ ಅವರ ನೇಮಕವನ್ನು ಹಿಂದಕ್ಕೆ ಪಡೆದಿದ್ದರು. ಹೀಗಾಗಿ ಪದ್ಮನಾಭ್ ಅವರು ಸಹಿ ಮಾಡಿದ್ದ 277 ಮತಗಟ್ಟೆಗಳ ಏಜೆಂಟರ ಮಾನ್ಯತೆಯೂ ರದ್ದಾಗಿದೆ.
ತಾಂತ್ರಿಕ ದೋಷ: ಎರಡು ಕಡೆ ಮತದಾನಕ್ಕೆ ಅಡ್ಡಿ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಎರಡು ಕಡೆ ಮತಯಂತ್ರದಲ್ಲಿನ ತಾಂತ್ರಿಕ ದೋಷದಿಂದಾಗಿ ಮತದಾನಕ್ಕೆ ಅಡಚಣೆಯಾಯಿತು.
ರಾಮನಗರದ ವಿಜಯನಗರದಲ್ಲಿನ ಮತಗಟ್ಟೆ ಸಂಖ್ಯೆ 54ರಲ್ಲಿ ಇವಿಎಂನಲ್ಲಿನ ತಾಂತ್ರಿಕ ದೋಷದಿಂದಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡಿತು. ನಂತರ ಯಂತ್ರವನ್ನು ದುರಸ್ತಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಯಿತು.
ಮರಳವಾಡಿ ಹೋಬಳಿಯ ಬನ್ನಿಕುಪ್ಪೆ ಗ್ರಾಮದ ಮತಗಟ್ಟೆ ಸಂಖ್ಯೆ 171ರಲ್ಲಿನ ಇವಿಎಂನಲ್ಲಿಯೂ ದೋಷ ಕಾಣಿಸಿಕೊಂಡಿತು. ಬಳಿಕ ದುರಸ್ತಿಗೊಳಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಯಿತು.