ರಾಯಚೂರು: ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವರಾದ ಬಿ.ಶ್ರೀರಾಮುಲು ಮತ್ತು ಪ್ರಭು ಚವಾಣ ಅವರು ಬುಧವಾರ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿ ಅವಲೋಕಿಸಿದರು. ಹಾನಿ ಮತ್ತು ಪರಿಹಾರದ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
‘ಜಿಲ್ಲೆಯಲ್ಲಿ ಪ್ರವಾಹದಿಂದ ₹ 332 ಕೋಟಿ ಹಾನಿಯಾಗಿದೆ. ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ ಹಾನಿ ಲೆಕ್ಕಹಾಕಿದರೆ ₹58.26 ಕೋಟಿಯಷ್ಟಾಗುತ್ತದೆ. ಈ ನಷ್ಟದ ವ್ಯತ್ಯಾಸ ಸರಿದೂಗಿಸುವ ಕುರಿತು ಮುಖ್ಯಮಂತ್ರಿ ಅವ ರೊಂದಿಗೆ ಚರ್ಚಿಸಲಾಗುವುದು’ ಎಂದು ಸಚಿವರು ತಿಳಿಸಿದರು.ಬಿಜೆಪಿ ಶಾಸಕ ಶಿವನಗೌಡ ನಾಯಕ ಗೈರಾಗಿದ್ದರು. ‘ಸಂಪುಟದಲ್ಲಿ ಪ್ರಾತಿನಿಧ್ಯ ದೊರೆಯದ ಜಿಲ್ಲೆಗಳಿಗೆಮುಂಬರುವ ದಿನಗಳಲ್ಲಿ ನ್ಯಾಯ ದೊರೆಯಲಿದೆ’ ಎಂದು ಶ್ರೀರಾಮುಲು ಪ್ರತಿಕ್ರಿಯಿಸಿದರು.
ಪುನರ್ವಸತಿಗೆ ಸಚಿವರೆದುರು ಕಣ್ಣೀರಿಟ್ಟ ಮಹಿಳೆ
ಚಿಕ್ಕಮಗಳೂರು: ಮಳೆಗೆ ಧರೆ ಕುಸಿದು ಮನೆ ನೆಲಸಮವಾಗಿದೆ, ತೋಟ ಕೊಚ್ಚಿ ಹೋಗಿದೆ, ಬೀದಿಪಾಲಾಗಿದ್ದೇವೆ. ಕುಟುಂಬದವರೆಲ್ಲ ಈಗ ನೆಂಟರ ಮನೆಯಲ್ಲಿದ್ದೇವೆ, ದಯವಿಟ್ಟು ಪುನರ್ವಸತಿ ಕಲ್ಪಿಸಿ; ಬದುಕು ಕಟ್ಟಿಕೊಳ್ಳಲು ನಮಗೆ ನೆರವಾಗಿ…
ಅತಿವೃಷ್ಟಿ ಹಾನಿ ವೀಕ್ಷಣೆಗೆ ಬಂದಿದ್ದ ಸಚಿವರಾದ ಸಿ.ಟಿ. ರವಿ, ಜೆ.ಸಿ. ಮಾಧುಸ್ವಾಮಿ ಎದುರು ಮೂಡಿಗೆರೆ ತಾಲ್ಲೂಕಿನ ಜಾವಳಿ ಹೋಬಳಿಯ ಮಲೆಮನೆಯ ವಿಂಧ್ಯಾ ಕಣ್ಣೀರಿಟ್ಟರು.
‘ಮಳೆಯಿಂದ ಗುಡ್ಡದ ಮಣ್ಣು ಕುಸಿದು ಅವಾಂತರವಾಗಿದೆ. ಕುಟುಂಬದವರೆಲ್ಲ ಒಂದಿಡೀ ರಾತ್ರಿ ಕಗ್ಗತ್ತಲಿನಲ್ಲಿ ಮನೆಯ ಅಟ್ಟದಲ್ಲೇ ಕಳೆದಿದ್ದೇವೆ. ಅಲ್ಲಿಂದ ಪಾರಾಗಿದ್ದೇ ದೊಡ್ಡ ಸಾಹಸ. ನೆಂಟರ ಮನೆಯಲ್ಲಿ ಎಷ್ಟು ದಿನ ಇರಲು ಸಾಧ್ಯ? ನಮಗೆ ಬೇರೆ ಕಡೆ ಜಮೀನು ನೀಡಿ ಪುನರ್ವಸತಿ ಕಲ್ಪಿಸಲು ವ್ಯವಸ್ಥೆ ಮಾಡಿ’ ಎಂದು ಅಳಲಿಟ್ಟರು.
‘ದುಡಿಮೆಯ ಆಸರೆಯಾಗಿದ್ದ ತೋಟ ಕೊಚ್ಚಿ ಹೋಗಿದೆ. ಮನೆಯೂ ಇಲ್ಲವಾಗಿದೆ. ನಮ್ಮನ್ನು ಕೈಬಿಡಬೇಡಿ’ ಎಂದು ವಿಂಧ್ಯಾ ಅವರ ಪತಿ ರಾಜು ಗೋಳು ತೋಡಿಕೊಂಡರು.