ಬೆಂಗಳೂರು: ‘ಕರ್ನಾಟಕ ಲೋಕಾಯುಕ್ತ ಸಂಸ್ಥೆ ಸರ್ಕಾರಕ್ಕೆ ನೀಡುವ ಶೇ 90ರಷ್ಟು ವರದಿಗಳು ಮೂಲೆ ಸೇರುತ್ತವೆ. ಮಾಧ್ಯಮಗಳಲ್ಲಿ ವರದಿಯಾಗುವ ಕಾರಣದಿಂದ ಕೆಲವು ವರದಿಗಳು ಮಾತ್ರ ಜಾರಿಯಾಗುತ್ತವೆ’ ಎಂದುನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಹೇಳಿದರು.
‘ಕರ್ನಾಟಕ ಲೋಕಾಯುಕ್ತ ಹಾಗೂ ಕುಂದು–ಕೊರತೆ ಪರಿಹಾರ’ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಲೋಕಾಯುಕ್ತರಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವುದು, ಪರಿಹಾರ ಒದಗಿಸುವುದು ತೃಪ್ತಿ ತರುವ ಕೆಲಸ’ ಎಂದರು.
‘ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ನೀಡಿದ್ದ ವರದಿ ಜಾರಿಗಾಗಿ, ಲೋಕಾಯುಕ್ತ ಸಂಸ್ಥೆ ಬಲವರ್ಧನೆಗಾಗಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದ್ದವರು, ಅಧಿಕಾರಕ್ಕೆ ಬಂದ ನಂತರ, ಲೋಕಾಯುಕ್ತದ ಬದಲು ಎಸಿಬಿಗೆ ಬಲ ತುಂಬಿದರು’ ಎಂದರು.
‘ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಅಥವಾ ವಿಚಾರಣೆ ಮಾಡಲು, ಪ್ರಕರಣ ದಾಖಲಿಸಲು ಎಸಿಬಿ ಅಧಿಕಾರಿಗಳು ಸರ್ಕಾರದ ಅನುಮತಿ ಪಡೆಯಬೇಕು. ಪರಿಸ್ಥಿತಿ ಹೀಗಿದ್ದಾಗ ನ್ಯಾಯ ಹೇಗೆ ಸಿಗುತ್ತದೆ’ ಎಂದು ಅವರು ಪ್ರಶ್ನಿಸಿದರು. ‘ಜೈಲಿಗೆ ಹೋಗಿ ಬಂದವರಿಗೆ ಈಗ ಹೆಚ್ಚು ಮನ್ನಣೆ ನೀಡಲಾಗುತ್ತಿದೆ. ನೈತಿಕತೆ ಮರೆಯಾಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.