ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ನೇಮಕ ಆದೇಶವನ್ನು ಸರ್ಕಾರ ಶನಿವಾರ ರದ್ದುಗೊಳಿಸಿದೆ.
ಅಧ್ಯಕ್ಷ ಎಚ್. ಕಾಂತರಾಜ, ಸದಸ್ಯರಾದ ಕೆ.ಎನ್. ಲಿಂಗಪ್ಪ, ಎನ್.ಪಿ. ಧರ್ಮರಾಜ, ಶರಣಪ್ಪ ಡಿ. ಮಣಿಗಾರ, ಡಿ.ಜಿ. ಗೋಪಾಲ ಅವರನ್ನು ಮುಂದುವರಿಸಿದ್ದ ಆದೇಶವನ್ನು ರದ್ದುಗೊಳಿಸಲಾಗಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2014ರ ಜೂನ್ 26ರಂದು ನೇಮಕವಾಗಿದ್ದ ಅಧ್ಯಕ್ಷ ಮತ್ತು ಸದಸ್ಯರ ಮೂರು ವರ್ಷಗಳ ಅವಧಿ 2017ರಲ್ಲೇ ಮುಕ್ತಾಯಗೊಂಡಿತ್ತು. ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿ ಗಣತಿ) ನಡೆಯುತ್ತಿದ್ದ ಕಾರಣ ಅದು ಮುಗಿಯುವ ತನಕ ಎಲ್ಲ ರನ್ನೂ ಮುಂದುವರಿಸಿ 2017ರ ಜುಲೈ 15ರಂದು ಆದೇಶ ಹೊರಡಿಸಲಾಗಿತ್ತು.
‘ಸಿದ್ದರಾಮಯ್ಯ ಅವರ ಸರ್ಕಾರದ ಅವಧಿ ಮುಗಿಯುವಷ್ಟರಲ್ಲಿ ಸಮೀಕ್ಷೆ ಪೂರ್ಣವಾಗಿರಲಿಲ್ಲ. ಎಚ್.ಡಿ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾದ ಕೆಲ ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿತ್ತು. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿವರದಿ ಸಿದ್ಧವಾಗಿರುವ ಬಗ್ಗೆ ಚರ್ಚೆಯನ್ನೂ ನಡೆಸಿದ್ದೆ. ಆದರೆ, ವರದಿ ಸಲ್ಲಿಕೆಗೆ ದಿನಾಂಕ ಸಿಗಲಿಲ್ಲ’ ಎಂದು ಎಚ್. ಕಾಂತರಾಜ ತಿಳಿಸಿದರು.