ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡಿನಲ್ಲಿ ಕನ್ನಡ ಕಂಪು: ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣಾ ದಿನಾಚರಣೆ

Last Updated 2 ನವೆಂಬರ್ 2019, 9:33 IST
ಅಕ್ಷರ ಗಾತ್ರ

ಭಾಷಾವಾರು ಪ್ರಾಂತ್ಯರಚನೆಯಾಗಿ 63 ವರ್ಷಗಳು ಕಳೆದರೂ ನಮ್ಮ ಕನಸು ಈಡೇರದ ಕೊರಗು, ಕೇರಳದಲ್ಲಿದ್ದು ಕನ್ನಡಿಗರಾಗಿ ಬದುಕಲು ಬಿಡದ ಕೇರಳ ಸರ್ಕಾರದ ದಮನನೀತಿ, ಕನ್ನಡ ಭಾಷೆ ಸಂಸ್ಕೃತಿ ಹಾಗೂ ಕನ್ನಡಿಗರ ನ್ಯಾಯೋಚಿತ ಸಾಂವಿಧಾನಿಕ ಹಕ್ಕುಗಳನ್ನು ಉಳಿಸುವ ಅನಿವಾರ್ಯ ಪ್ರಯತ್ನ ಈಗ ಹೋರಾಟದ ದಿಕ್ಕನ್ನು ಬದಲಿಸುವಂತೆ ಮಾಡಿದೆ.

1956 ನವೆಂಬರ್‌ 1ರಂದು ಭಾಷೆಗಳ ಆಧಾರದಲ್ಲಿ ರಾಜ್ಯಗಳ ರಚನೆಯಾದಾಗ ಕನ್ನಡ ಮಾತನಾಡುವ ಜನರಿರುವ ಪ್ರದೇಶಗಳು ಏಕೀಕರಣಗೊಂಡು ಕರ್ನಾಟಕ ರಾಜ್ಯವೂ ಮಲಯಾಳಂ ಮಾತನಾಡುವ ಪ್ರದೇಶಗಳು ಸೇರಿ ಕೇರಳ ರಾಜ್ಯವೂ ರಚನೆಯಾದವು. ಆದ್ದರಿಂದ ಈ ದಿನವನ್ನು ಕರ್ನಾಟಕದಲ್ಲಿ ಕನ್ನಡರಾಜ್ಯೋತ್ಸವ ದಿನವನ್ನಾಗಿಯೂ ಕೇರಳದಲ್ಲಿ ಕೇರಳ ರಾಜ್ಯಪ್ಪಿರವಿ ( ಕೇರಳ ರಾಜ್ಯೋದಯ) ದಿನವನ್ನಾಗಿಯೂ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಆದರೆ ಈ ಸಂದರ್ಭದಲ್ಲಿ ತಮ್ಮದಲ್ಲದ ತಪ್ಪಿನಿಂದ ಅನ್ಯಾಯವಾಗಿ ಕೇರಳಕ್ಕೆ ಸೇರಿಹೋದ, ಬಳಿಕ ಭಾಷೆಯ ಕಾರಣಕ್ಕೆ ಕಷ್ಟಗಳ ಪರಂಪರೆಯನ್ನು ಅನುಭವಿಸುತ್ತಿರುವ ಅಚ್ಚಗನ್ನಡನೆಲ ಗಡಿನಾಡು ಕಾಸರಗೋಡಿನ ಜನರು ಈ ದಿನದ ಬಗ್ಗೆ ಸಂಭ್ರಮಿಸಲು ಯಾವುದೇ ಕಾರಣಗಳಿಲ್ಲ! ದಶಕಗಳ ಹಿಂದಿನವರೆಗೂ ಕರ್ನಾಟಕ ಏಕೀಕರಣ ಸಮಿತಿಯ ಆಶ್ರಯದಲ್ಲಿ ಈ ದಿನವನ್ನು ಪ್ರತಿಭಟನೆ, ಧರಣಿಗಳೊಂದಿಗೆ ಕರಾಳದಿನವನ್ನಾಗಿ ಆಚರಿಸುತ್ತಿದ್ದೆವು. ಮಹಾಜನವರದಿ ಜಾರಿಯಾಗಬೇಕೆಂದೂ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕೆಂದೂ ಹಕ್ಕೊತ್ತಾಯವನ್ನು ಮೊಳಗಿಸುತ್ತಿದ್ದೆವು. ಇದು ಕೇವಲ ನವೆಂಬರ್‌ 1ಕ್ಕೆ ಸೀಮಿತವಾದ ಕನ್ನಡಾಭಿಮಾನವಾಗಿರದೆ 1956ರ ಬಳಿಕ ನಿರಂತರವಾಗಿ ನಡೆದುಬಂದ ನಮ್ಮ ಹೋರಾಟದ ಒಂದು ಭಾಗವಾಗಿತ್ತು. ಆದರೆ ನಮ್ಮ ಧ್ವನಿಯನ್ನು ಕರ್ನಾಟಕ ಸರ್ಕಾರವಾಗಲೀ ಕೇರಳ ಸರ್ಕಾರವಾಗಲೀ ಕೇಂದ್ರ ಸರ್ಕಾರವಾಗಲೀ ಕೇಳಿಸಿಕೊಳ್ಳದೆ ನಮ್ಮ ಕೂಗು ಬರಿಯ ಅರಣ್ಯ ರೋದನವಾಯಿತು. ಈಚೆಗೆ ಕನ್ನಡ ಹೋರಾಟಸಮಿತಿಯ ಆಶ್ರಯದಲ್ಲಿ ನವೆಂಬರ್‌ 1 ಅನ್ನು ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣಾ ದಿನವನ್ನಾಗಿ ಧರಣಿ, ಪ್ರತಿಭಟನೆಗಳೊಂದಿಗೆ ಆಚರಿಸಲಾಗುತ್ತಿದೆ. ಕರ್ನಾಟಕದೊಂದಿಗಿನ ವಿಲೀನದ ಬೇಡಿಕೆಯನ್ನು ಕೈಬಿಟ್ಟಿದ್ದೇವೆ ಎಂಬುದು ಇದರ ಅರ್ಥವಲ್ಲ. ಆದರೆ ಭಾಷಾವಾರು ಪ್ರಾಂತ್ಯರಚನೆಯಾಗಿ 63 ವರ್ಷಗಳು ಕಳೆದರೂ ನಮ್ಮ ಕನಸು ಈಡೇರದ ಕೊರಗು, ಕೇರಳದಲ್ಲಿದ್ದು ಕನ್ನಡಿಗರಾಗಿ ಬದುಕಲು ಬಿಡದ ಕೇರಳ ಸರ್ಕಾರದ ದಮನನೀತಿ, ಕನ್ನಡ ಭಾಷೆ ಸಂಸ್ಕೃತಿ ಹಾಗೂ ಕನ್ನಡಿಗರ ನ್ಯಾಯೋಚಿತ ಸಾಂವಿಧಾನಿಕ ಹಕ್ಕುಗಳನ್ನು ಉಳಿಸುವ ಅನಿವಾರ್ಯ ಪ್ರಯತ್ನ ಈಗ ಹೋರಾಟದ ದಿಕ್ಕನ್ನು ಬದಲಿಸುವಂತೆ ಮಾಡಿದೆ.

ಕೇರಳದಲ್ಲಿ ಕಾಸರಗೋಡು ಕನ್ನಡಿಗರನ್ನು ಭಾಷಾ ಅಲ್ಪಸಂಖ್ಯಾತರನ್ನಾಗಿ ಅಂಗೀಕರಿಸಿ ಅವರ ಹಿತರಕ್ಷಣೆಗಾಗಿ ಕೆಲವು ಆದೇಶಗಳನ್ನು ಹೊರಡಿಸಿದ್ದರೂ ಸರ್ಕಾರದ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಮಲತಾಯಿಧೋರಣೆಯ ಕಾರಣದಿಂದ ಯಾವ ಪ್ರಯೋಜನವೂ ದೊರೆಯುತ್ತಿಲ್ಲ. ಮಾತ್ರವಲ್ಲ ಭಾಷೆಯ ಕಾರಣಕ್ಕೆ ಹೊಸಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿದ್ದು ಸಂವಿಧಾನದತ್ತ ಮೂಲಹಕ್ಕುಗಳಿಗೂ ಚ್ಯುತಿಯಾಗಿದೆ. ಕನ್ನಡಶಾಲೆಗಳಿಗೆ ಕನ್ನಡದ ಓದು ಬರಹದ ಪ್ರಾಥಮಿಕ ಜ್ಞಾನವಿರಲಿ, ಕನ್ನಡವನ್ನು ಅರ್ಥಮಾಡಿಕೊಳ್ಳಲೂ ಸಾಧ್ಯವಾಗದ ಶಿಕ್ಷಕರನ್ನು ನೇಮಿಸುತ್ತಿರುವುದು ಇದಕ್ಕೆ ಒಂದು ಉದಾಹರಣೆ. ಸಂವಿಧಾನದ 360 ಎ ವಿಧಿ ಸ್ಪಷ್ಟವಾಗಿ ಸೂಚಿಸುವಂತೆ ಭಾಷಾ ಅಲ್ಪಸಂಖ್ಯಾತರಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡುವುದು ರಾಜ್ಯ ಸರ್ಕಾರ ಕರ್ತವ್ಯ. ಆದರೆ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಬೋಧಿಸಲು ಕನ್ನಡ ಅರಿಯದ ಅಧ್ಯಾಪಕರನ್ನು ನೇಮಿಸಿ ಮಲಯಾಳದಲ್ಲಿ ಪಾಠ ಮಾಡಿಸುತ್ತ ಬಡ ಕನ್ನಡಮಕ್ಕಳ ಭವಿಷ್ಯಕ್ಕೆ ಕೊಡಲಿಯೇಟು ಹಾಕುತ್ತಿರುವುದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೆ? ಸಂವಿಧಾನ, ಸಮಾನತೆ, ಮಕ್ಕಳ ಹಕ್ಕು, ಗುಣಮಟ್ಟದ ಶಿಕ್ಷಣ, ಮಾತೃಭಾಷೆಯಲ್ಲಿ ಶಿಕ್ಷಣ, ಸಾರ್ವಜನಿಕ ಶಿಕ್ಷಣರಂಗದ ರಕ್ಷಣೆ ಎಂಬದರ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಿರುವ ಕೇರಳದ ರಾಜಕಾರಣಿಗಳು ಹಾಗೂ ಸರ್ಕಾರವು ಸರ್ಕಾರ ಕನ್ನಡಶಾಲೆಗಳನ್ನಾಶ್ರಯಿಸಿದ ಬಡ ಕನ್ನಡ ಮಕ್ಕಳ ಬಗ್ಗೆ ತೋರುತ್ತಿರುವ ಈ ನಿರ್ಲಕ್ಷ್ಯಕ್ಕೆ ಭಾಷಾದ್ವೇಷವಲ್ಲದೆ ಬೇರೆ ಕಾರಣವೇನಿದೆ? ಕಾಸರಗೋಡಿನಲ್ಲಿ ಪ್ರಾಥಮಿಕಶಾಲೆಗಳಿಗೂ ಹಿಂದಿ, ಇಂಗ್ಲಿಷ್‌, ಸಂಸ್ಕೃತ ಮೊದಲಾದ ವಿಷಯಗಳನ್ನು ಕಲಿಸಲು ಕನ್ನಡ ತಿಳಿಯದ ಶಿಕ್ಷಕರನ್ನು ನೇಮಿಸಲಾಗುತ್ತಿದೆ.

ಈಚೆಗೆ ಕೆಲವು ವರ್ಷಗಳಿಂದ ಕಠಿನವಿಷಯಗಳಾದ ಗಣಿತ, ವಿಜ್ಞಾನ, ಸಮಾಜವಿಜ್ಞಾನಗಳನ್ನು ಬೋಧಿಸಲು ಕೂಡಾ ಕನ್ನಡದ ಗಂಧಗಾಳಿಯಿಲ್ಲದ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಪೋಷಕರ ಪ್ರತಿಭಟನೆಗೂ ಮಕ್ಕಳ ಉಪವಾಸ ಸತ್ಯಾಗ್ರಹಕ್ಕೂ ಅಧಿಕಾರಿಗಳು ಮಣಿಯುತ್ತಿಲ್ಲ. ಪ್ರತಿಭಟನೆ ತೀವ್ರವಾದರೆ ಈ ಅನರ್ಹ ಶಿಕ್ಷಕರನ್ನು ಮೈಸೂರಿನ ಪ್ರದೇಶಿಕ ಭಾಷಾ ಶಿಕ್ಷಣಕೇಂದ್ರಕ್ಕೆ ಕಳುಹಿಸಿ ಆರು ತಿಂಗಳು ಶಿಶುವಿಹಾರ ಮಟ್ಟದ ಕನ್ನಡ ಕಲಿಕೆಯ ಪ್ರಹಸನ ನಡೆಸಿ ಮತ್ತೆ ಅದೇ ಶಾಲೆಗಳಲ್ಲಿ ನೇಮಿಸಿ ಮಲಯಾಳದಲ್ಲಿ ಪಾಠ ಮಾಡಿಸಲಾಗುತ್ತಿದೆ. ಪಾಠ ಅರ್ಥವಾಗದ ಮಕ್ಕಳ ಗೋಳು ಕೇಳುವವರಿಲ್ಲ. ಕೇರಳದ ಪ್ರಜ್ಞಾವಂತ ಚಿಂತಕರು, ಮಲಯಾಳ ಮಾಧ್ಯಮಗಳು ಈ ವಿಷಯದಲ್ಲಿ ತೋರುತ್ತಿರುವ ಮೌನ ಆಘಾತಕಾರಿ.

‘ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ ಕಾಸರಗೋಡು’ ಚಲನಚಿತ್ರದ ಮೂಲಕ ಕೇರಳ ಸರ್ಕಾರದ ಅನ್ಯಾಯ ಬೆಳಕಿಗೆ ಬಂದರೂ ಕರ್ನಾಟಕದ ಮಾಧ್ಯಮಗಳಲ್ಲಿ ಇದು ವರದಿಯಾದರೂ ಕರ್ನಾಟಕದ ಸಾಹಿತಿ-ಚಿಂತಕರಾಗಲೀ, ರಾಜಕಾರಣಿಗಳಾಗಲೀ ಹೋರಾಟಗಾರರಾಗಲೀ ಕೇರಳ ಸರ್ಕಾರಕ್ಕೆ ಕನಿಷ್ಠಪಕ್ಷ ಪತ್ರ ಬರೆದು ಪ್ರತಿಭಟನೆಯನ್ನೂ ಸೂಚಿಸುತ್ತಿಲ್ಲ. ಇದು ಭಾಷೆಯ ಪ್ರಶ್ನೆಯಲ್ಲ. ಸಂವಿಧಾನೋಕ್ತವಾದ ಮಾತೃಭಾಷಾ ಶಿಕ್ಷಣದ ಪ್ರಶ್ನೆ. ಮಕ್ಕಳ ಹಕ್ಕು ಮಾನವ ಹಕ್ಕುಗಳ ಪ್ರಶ್ನೆ. ಹೀಗಿದ್ದರೂ ಕೇರಳದಿಂದ ಬಿಡಿ, ಕರ್ಮಾಟಕದ ಕಡೆಯಿಂದಲಾದರೂ ಕಾಸರಗೋಡು ಕನ್ನಡಿಗರಿಗೆ ನೈತಿಕ ಬೆಂಬಲ ದೊರೆಯುತ್ತಿಲ್ಲ.

ಬಹುತ್ವವನ್ನು ರಕ್ಷಿಸಬೇಕೆಂದು ತೋರಿಕೆಗಾಗಿ ಹೇಳುತ್ತಿರುವ ಕೇರಳ ಸರ್ಕಾರ ಮಲಯಾಳ ಹೇರಿಕೆಯ ಮೂಲಕ ಕಾಸರಗೋಡಿನ ಭಾಷಿಕ ಬಹುತ್ವವನ್ನು ಬಹಳ ನಾಜೂಕಾಗಿ ಕೊನೆಗೊಳಿಸುತ್ತಿದೆ. ಮಲಯಾಳ ಭಾಷೆಯನ್ನು ಕಡ್ಡಾಯಗೊಳಿಸಿ ಕಾನೂನು ಜಾರಿಗೆ ಬಂದಿದೆ. ಕಾಸರಗೋಡಿನ ಸ್ಥಳನಾಮಗಳನ್ನೆಲ್ಲ ಮಲಯಾಳೀಕರಿಸಲಾಗಿದೆ. ಕನ್ನಡದಲ್ಲಿ ಯಾವ ಮಾಹಿತಿಯೂ ಸಾಮಾನ್ಯ ಜನರಿಗೆ ದೊರೆಯುತ್ತಿಲ್ಲ.

ಇಲ್ಲಿ ಅಸ್ತಿತ್ವದಲ್ಲೇ ಇಲ್ಲದ ಓಣಂ ಹಬ್ಬವನ್ನು ಕಡ್ಡಾಯವಾಗಿ ಆಚರಿಸುವಂತೆ ಮಾಡಲಾಗುತ್ತಿದೆಯಲ್ಲದೆ ಶಾಲೆಗಳಲ್ಲಿ ಕನ್ನಡ ಮಕ್ಕಳು ದಸರಾ ಆಚರಿಸಲು ಕೂಡ ಅವಕಾಶ ನೀಡುತ್ತಿಲ್ಲ. ಕಾಸರಗೋಡಿನಲ್ಲಿ ಸುಮಾರು 180ರಷ್ಟು ಕನ್ನಡಶಾಲೆಗಳಿದ್ದು 40 ಸಾವಿರದಷ್ಟು ಕನ್ನಡ ವಿದ್ಯಾರ್ಥಿಗಳಿದ್ದಾರೆ. ಭಾಷಿಕವಾಗಿ ಸಾಂಸ್ಕೃತಿಕವಾಗಿ ಅವಿಭಜಿತ ದಕ್ಷಿಣಕನ್ನಡವನ್ನು ಹೋಲುವ ಈ ಪ್ರದೇಶದಲ್ಲಿ ಕನ್ನಡ, ತುಳು, ಮರಾಠಿ, ಕೊಂಕಣಿ, ಉರ್ದು, ಬ್ಯಾರಿ, ಸ್ಥಳೀಯ ಮಲಯಾಳ ಮೊದಲಾದ ಭಾಷೆಗಳನ್ನಾಡುವವರು ಕನ್ನಡಶಾಲೆಗಳಲ್ಲಿ ಕಲಿಯುತ್ತ ಪರಂಪರಾಗತವಾಗಿ ಅಚ್ಚಗನ್ನಡಿಗರಾಗಿದ್ದರು. ಇಂದು ಆಡಳಿತ, ವ್ಯವಹಾರ, ಶಿಕ್ಷಣ, ಸಂಸ್ಕೃತಿ ಮೊದಲಾದ ವಿವಿಧ ರಂಗಗಳಲ್ಲಿ ಮಲಯಾಳ ಹೇರಿಕೆಯ ಪರಿಣಾಮವಾಗಿ ಕನ್ನಡಿಗರ ಮನೆಮಾತು ಕೂಡ ಮಲಯಾಳವಾಗಿ ಬದಲಾಗುತ್ತಿದೆ.

ಚಾರಿತ್ರಕವಾಗಿ ಕದಂಬ, ವಿಜಯನಗರ ದೊರೆಗಳು ಇಕ್ಕೇರಿನಾಯಕರು ಮೊದಲಾದವರು ಆಳಿದ ನಾಡು. ಹನ್ನೆರಡನೇ ಶತಮಾನದ ಜಯಸಿಂಹನ ಕಾಲದ ಅಚ್ಚಗನ್ನಡದ ತಳಂಗರೆಶಾಸನ ಇಲ್ಲಿನ ಕನ್ನಡದ ಪ್ರಾಚೀನ ಇತಿಹಾಸಕ್ಕೆ ಸಾಕ್ಷಿ. ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನದೊರೆಯಲು ಅಗತ್ಯವಾದ ಸಂಶೋಧನೆಮಾಡಿದ ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಕನ್ನಡ ಹೋರಾಟಗಾರರಾದ ಕಳ್ಳಿಗೆ ಮಹಾಬಲ ಭಂಡಾರಿ, ಕಯ್ಯಾರ ಕಿಞ್ಞಣ್ಣ ರೈ, ತುಳು ಲಿಪಿ ಸಂಶೋಧಕ ವಿದ್ವಾಂಸ ವೆಂಕಟರಾಜ ಪುಣಿಂಚತ್ತಾಯ, ಕವಿ ಕೆ.ವಿ. ತಿರುಮಲೇಶ್ ಮೊದಲಾದ ಅನೇಕಮಂದಿ ಧೀಮಂತರು, ಸಾಹಿತಿಗಳು, ಬಹುಭಾಷಾ ಪಂಡಿತರು, ಹುಟ್ಟಿ ಬೆಳೆದ ನಾಡು. ಈಗ ಕೂಡ ಇಲ್ಲಿನ ಹೆಚ್ಚಿನ ಮನೆಗಳಲ್ಲಿ ಒಬ್ಬರಾದರೂ ಯಕ್ಷಗಾನ ಕಲಾವಿದರು, ಸಾಹಿತ್ಯಾಸಕ್ತರು ಕಂಡುಬರುತ್ತಾರೆ. ಆದರೆ ಕೇರಳ ಸರ್ಕಾರದ ಕನ್ನಡದಮನನೀತಿ ಹಾಗೂ ಮಲಯಾಳೀಕರಣ ಹೀಗೆ ಮುಂದುವರಿದರೆ ಸಾಂಸ್ಕೃತಿಕವಾಗಿ ಈ ನಾಡು ಬರಡಾಗುವುದು ಖಂಡಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT