ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರಿ ರಂಗನ್ ವರದಿಗೆ ರಾಜ್ಯ ಸರ್ಕಾರ ವಿರೋಧ

Last Updated 4 ಡಿಸೆಂಬರ್ 2019, 19:12 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಸ್ತೂರಿ ರಂಗನ್‌ ವರದಿಯ ಶಿಫಾರಸು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಕರಡು ಅಧಿಸೂಚನೆಯನ್ನು ಈಗಿರುವ ರೂಪದಲ್ಲಿ ಒಪ್ಪಲು ಸಾಧ್ಯವೇ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ವಿರೋಧಿಸಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಬುಧವಾರ ಈ ಸಂಬಂಧ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆಗಳ ಸಚಿವ ಪ್ರಕಾಶ್ ಜಾವಡೇಕರ್‌ ಅವರಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಈ ವಿಷಯವಾಗಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಕ್ಕೂ ಮೊದಲು ರಾಜ್ಯದ ಜತೆಗೆ ಅರ್ಥಪೂರ್ಣ ಮಾತುಕತೆ ನಡೆಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

‘ಶಿಫಾರಸನ್ನು ಯಥಾವತ್ತು ಜಾರಿ ಮಾಡುವುದರಿಂದ ಆರ್ಥಿಕ ಚಟುವಟಿಕೆಗಳೂ ಸೇರಿ ಹಲವು ನಿರ್ಬಂಧಗಳು ಜಾರಿ ಆಗಲಿವೆ. ಇದರಿಂದ ಜನರ ಜೀವನೋಪಾಯಕ್ಕೆ ಧಕ್ಕೆಯಾಗುತ್ತದೆ. ಈ ಹಿಂದೆ ಹೊರ ಡಿಸಿದ ಕರಡು ಅಧಿಸೂಚನೆಗಳಿಗೂ ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟ ಅಭಿ ಪ್ರಾಯವನ್ನು ನೀಡಿದೆ. ಪಶ್ಚಿಮಘಟ್ಟದ ಜನರ ಆತಂಕವನ್ನೂ ಕೇಂದ್ರದ ಗಮನಕ್ಕೆ ತರಲಾಗಿದೆ. ಕರಡು ಅಧಿ ಸೂಚನೆ ಅವಧಿ ಮುಗಿದಿದ್ದು, ಅಂತಿಮ ಅಧಿಸೂಚನೆ ಇನ್ನೂ ಹೊರಡಿಸಿಲ್ಲ’ ಎಂದು ಯಡಿಯೂರಪ್ಪ ಹೇಳಿದ್ದಾರೆ.

‘ಶಿಫಾರಸಿನಲ್ಲಿ ಸೂಚಿಸಿರುವ 20,668 ಚದರ ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಈಗಾಗಲೇ 16,632 ಚದರ ಕಿ.ಮೀ ಪ್ರದೇಶವನ್ನು ರಕ್ಷಿತ ಅರಣ್ಯ, ಅಧಿಸೂಚಿತ ಅರಣ್ಯ, ಪರಿಸರ ಸೂಕ್ಷ್ಮ ವಲಯದ ಅಡಿಯಲ್ಲಿ ರಕ್ಷಿಸಿಕೊಂಡು ಬಂದಿದ್ದೇವೆ. ಇನ್ನೂ ಹೆಚ್ಚು ನಿರ್ಬಂಧ ವಿಧಿಸುವುದರಿಂದ ಸಂರಕ್ಷಣೆಯ ಮೂಲ ಉದ್ದೇಶವನ್ನೇ ನಿರಾಕರಿಸಿದಂತಾಗುತ್ತದೆ. ಇದರಿಂದ ವ್ಯತಿರಿಕ್ತ ಪರಿಣಾಮ ಆಗಬಹುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಶಿಫಾರಸುಗಳನ್ನು ಜಾರಿ ಮಾಡುವುದರಿಂದ ಆರ್ಥಿಕ ನಷ್ಟ ಆಗುತ್ತದೆ. ಇದನ್ನು ಭರಿಸಲು ಪ್ರೋತ್ಸಾಹ ಧನ ನೀಡುವಂತೆ ವರದಿಯಲ್ಲಿ ಸಲಹೆ ನೀಡಲಾಗಿದೆ. ಆದರೆ ಕರಡು ಅಧಿಸೂಚನೆಯಲ್ಲಿ ಅದರ ಪ್ರಸ್ತಾಪವಿಲ್ಲ.ಈ ಎಲ್ಲ ಕಾರಣಗಳಿಂದ ಕರಡು ಅಧಿಸೂಚನೆ ವಿರೋಧಿಸುತ್ತಿರುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT