ಬೆಂಗಳೂರು: ಆಡಳಿತ ನ್ಯಾಯಮಂಡಳಿಯ ಬೆಳಗಾವಿ ಪೀಠಕ್ಕೆ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಹಾಗೂ ಆಡಳಿತಾತ್ಮಕ ಸದಸ್ಯ ವಿ.ಪಿ.ಬಳಿಗಾರ್ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಈ ಕುರಿತಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ ರಿಜಿಸ್ಟ್ರಾರ್ ಅವರು ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ.
ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಪ್ರಕರಣಗಳನ್ನು ಪೀಠವು ವಿಚಾರಣೆ ನಡೆಸಿ ವಿಲೇವಾರಿ ಮಾಡಲಿದೆ.
ಇದೇ 17 ರಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೀಠವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಕೆಲವು ಸರ್ಕಾರಿ ಕಚೇರಿಗಳನ್ನು ಉತ್ತರ ಕರ್ನಾಟಕದ ಭಾಗಕ್ಕೆ ಕಳುಹಿಸುವ ಸರ್ಕಾರದ ನಿರ್ಧಾರದ ಭಾಗವಾಗಿಆಡಳಿತ ನ್ಯಾಯಮಂಡಳಿಯ ಪೀಠವನ್ನು ಆರಂಭಿಸಲಾಗುತ್ತಿದೆ.
ಒಟ್ಟು 13,428 ಪ್ರಕರಣಗಳು ಬಾಕಿ ಉಳಿದಿವೆ. ಕಲಬುರ್ಗಿ ಪೀಠದಲ್ಲಿ 1506, ಬೆಳಗಾವಿ ಪೀಠದಲ್ಲಿ 2,644 ಮತ್ತು ಬೆಂಗಳೂರು ಪೀಠದಲ್ಲಿ 9,278 ಪ್ರಕರಣಗಳು ಬಾಕಿ ಉಳಿದಿವೆ.