ಬೆಂಗಳೂರು–ಹುಲಿಯೂರುದುರ್ಗ ಹೆದ್ದಾರಿ ಬಳಿಯ ಗಿಡದಕೆಂಚನ ಹಳ್ಳಿಯಲ್ಲಿರುವ ಪಟ್ಲದಮ್ಮ ಕೊಲ್ಲಾಪುರದಮ್ಮ ದೇವಸ್ಥಾನದಲ್ಲಿ ಏಪ್ರಿಲ್ 9ರಿಂದ 16ರವರೆಗೆ 15ನೇ ವಾರ್ಷಿಕ ಜಾತ್ರೆ ನೆರವೇರಲಿದೆ.
ಪ್ರತಿ ವರ್ಷ ಉತ್ತರಾಯಣದ ಚೈತ್ರ ಮಾಸದಲ್ಲಿ ಶುಕ್ಲ ಚತುರ್ಥಿಯಂದು ಆರಂಭಗೊಳ್ಳುವ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಭಾಗದ ಭಕ್ತಾದಿಗಳು ಆಗಮಿಸುತ್ತಾರೆ. ಏಪ್ರಿಲ್ 9 ರಂದು ಧ್ವಜಾರೋಹಣದೊಂದಿಗೆ ಜಾತ್ರೆ ಆರಂಭವಾಗಲಿದೆ. ಪ್ರತಿನಿತ್ಯ ಬೆಳಗಿನ ಜಾವದ ಪೂಜೆ, ಅಭಿಷೇಕ, ನಾಗದೇವತಾ ಮಂಟಪದಲ್ಲಿ ವಿಶೇಷ ಪೂಜೆ, ರಾತ್ರಿ ಉತ್ಸವ ಇರುತ್ತದೆ.
ಏ.13ರಂದು ಶ್ರೀರಾಮ ನವಮಿ ಆಚರಣೆ, 14ರಂದು ನಾಗದೇವತಾ ಮಂಟಪದಲ್ಲಿ ನಾಗರ ತನಿ ಎರೆಯುವುದು, ಮಹಾನೀರಾಜನ, 15ರಂದು ಸಂಜೆ ಕೆಂಚನಹಳ್ಳಿ, ಬಂದೀಗೌಡನಪಾಳ್ಯ ಮತ್ತು ಸುತ್ತಮುತ್ತಲ ಗ್ರಾಮಸ್ಥರಿಂದ ಅರಮನೆ ಆರತಿ ನಡೆಯಲಿದೆ.
ಕೊನೆಯ ದಿನವಾದ 16ರಂದು ಬೆಳಿಗ್ಗೆ 8.30ಕ್ಕೆ ಗಂಗಾ ಪೂಜೆ, ಹೂವುಗೊಂಡದ ಪೂಜೆ, ಸುದರ್ಶನ ಹೋಮ, ಅಷ್ಟಾವಧಾನ ಸೇವೆ, ಸಂಜೆ ಉತ್ಸವಮೂರ್ತಿಗಳ ಪುರ ಮೆರವಣಿಗೆ, ರಾತ್ರಿ ಮುತ್ತಿನ ಪಲ್ಲಕಿ ಉತ್ಸವ ನಡೆಯಲಿದೆ.
ಪ್ರತಿ ವರ್ಷವೂ ಜಾತ್ರೆಯ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಿಂದ ನೂರಾರು ಭಕ್ತರು ಪಾದಯಾತ್ರೆಯಲ್ಲಿ ಕೆಂಚನಹಳ್ಳಿಗೆ ಆಗಮಿಸಿ ಉತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷ.
ಮಾರ್ಗ: ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆಯಿಂದ ಹುಲಿಯೂರುದುರ್ಗ ಮಾರ್ಗವಾಗಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ಮೂಲಕ ಬಂದು ಚೌಡನಕುಪ್ಪೆಯಲ್ಲಿ ಇಳಿಯಬೇಕು. ಅಲ್ಲಿಂದ ಗಿಡದಕೆಂಚನಹಳ್ಳಿಗೆ ನಿಗದಿತ ವೇಳೆಯಲ್ಲಿ ಕೆಎಸ್ಆರ್ಟಿಸಿಯ ಬಸ್ ಸೌಕರ್ಯ ಇದೆ. ನಿಯಮಿತ ಆಟೊ ಸಂಚಾರವೂ ಇದೆ.