ಬೆಂಗಳೂರು: 20 ವರ್ಷಗಳ ಹಿಂದೆ ಕೆಂಗೇರಿ ಪುರಸಭೆ ಇದ್ದ ವೇಳೆ ನಡೆದಿತ್ತು ಎನ್ನಲಾದ ಅವ್ಯವಹಾರ ಸಂಬಂಧ, ಮಾಜಿ ಅಧ್ಯಕ್ಷ ಎಚ್.ಎಂ. ಗುರುಸ್ವಾಮಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
‘1998–99ರಿಂದ 2001ನೇ ಸಾಲಿನಲ್ಲಿ ನಡೆದಿರುವ ಅವ್ಯವಹಾರ ಸಂಬಂಧ, ಬಿಬಿಎಂಪಿ ಕೆಂಗೇರಿ ಉಪನಗರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎಲ್. ಮಾರ್ಕಂಡಯ್ಯ ದೂರು ನೀಡಿದ್ದರು. ಆಗಸ್ಟ್ 28ರಂದು ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು’ ಎಂದು ಕೆಂಗೇರಿ ಪೊಲೀಸರು ಹೇಳಿದರು.
‘ಅಂದಿನ ಅಧ್ಯಕ್ಷರಾಗಿದ್ದ ಬೋರಮ್ಮ, ಆರ್.ಆಂಜನಪ್ಪ, ಗುರುಸ್ವಾಮಿ, ಮುಖ್ಯ ಅಧಿಕಾರಿ ಎಂ.ಹುಲ್ಲೂರಯ್ಯ, ಆರೋಗ್ಯ ಅಧಿಕಾರಿ ಎನ್.ಕೃಷ್ಣಪ್ಪ, ವ್ಯವಸ್ಥಾಪಕ ಸಿ.ಲೋಕೇಶ್ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.’
‘ಹುಲ್ಲೂರಯ್ಯ ಅವರು ತೀರಿಕೊಂಡಿದ್ದಾರೆ. ಗುರುಸ್ವಾಮಿ ಅವರನ್ನು ಬಂಧಿಸಲಾಗಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ’ ಎಂದರು.
ಪ್ರಕರಣದ ವಿವರ: ‘ಪುರಸಭೆಗೆ ನೀಡಿದ್ದ ವಿಶೇಷ ಅನುದಾನದಲ್ಲಿ ₹ 79.70 ಲಕ್ಷವನ್ನು ಆರೋಪಿಗಳು ದುರುಪಯೋಗಪಡಿಸಿಕೊಂಡಿದ್ದರು. ತನಿಖೆ ನಡೆಸಿದ್ದ ಲೋಕಾಯುಕ್ತ ಸಂಸ್ಥೆ, ಅವ್ಯವಹಾರ ಪತ್ತೆ ಮಾಡಿತ್ತು. ಅದರ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ಅದರನ್ವಯವೇ ಮಾರ್ಕಂಡಯ್ಯ ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.