ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕಾಂಗ್ರೆಸ್‌ ಕಾರ್ಯಕರ್ತರ ಕೊಲೆ ಹೇಯ ಕೃತ್ಯ

ಕಾಸರಗೋಡಿನಲ್ಲಿ ಸಿಪಿಎಂ ಕಚೇರಿಗೆ ಶಿಲಾನ್ಯಾಸ ನೆರವೇರಿಸಿದ ವಿಜಯನ್‌
Last Updated 22 ಫೆಬ್ರುವರಿ 2019, 11:19 IST
ಅಕ್ಷರ ಗಾತ್ರ

ಕಾಸರಗೋಡು: ‘ಪೆರಿಯದ ಕಲ್ಯೋಟ್‌ನಲ್ಲಿ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತ ಕಗ್ಗೊಲೆ ಅತ್ಯಂತ ಹೇಯವಾದ ಘಟನೆಯಾಗಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಅಪರಾಧಿಗಳಿಗೆ ಯಾವುದೇ ರೀತಿಯ ಬೆಂಬಲವಾಗಲಿ, ಆಶ್ರಯವಾಗಲಿ ಸಿಗುವುದಿಲ್ಲ’ ಎಂದು ಕೇರಳಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

ಇಲ್ಲಿನ ವಿದ್ಯಾನಗರದಲ್ಲಿ ₹3.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಸಿಪಿಎಂನ ಕಾಸರಗೋಡು ಜಿಲ್ಲಾ ನೂತನ ಕಚೇರಿ ಕಟ್ಟಡಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

‘ಎಡರಂಗಕ್ಕೆ ಅಪಕೀರ್ತಿ ಉಂಟು ಮಾಡುವ ಘಟನೆ ನಡೆದು ಹೋಗಿದೆ. ಕೊಲೆಯನ್ನು ಯಾವುದೇ ಕಾರಣಕ್ಕೂ ಬೆಂಬಲಿಸಲಾಗದು. ಯಾರೇ ತಪ್ಪು ಮಾಡಿದರೂ ಅದನ್ನು ಹೊರಬೇಕಾದ ಅಗತ್ಯ ಸಿಪಿಎಂಗಿಲ್ಲ. ಈ ವಿಷಯವನ್ನು ಈಗಾಗಲೇ ಪಕ್ಷ ಸ್ಪಷ್ಟಪಡಿಸಿದೆ. ಅಪರಾಧಿಗಳಿಗೆ ತಕ್ಕ ಶಿಕ್ಷೆ ಕೊಡಿಸಲು ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ’ ಎಂದು ಹೇಳಿದರು.

‘ಜನರ ಶಾಂತಿ ಭಂಗ ಪಡಿಸಿದವರನ್ನು ಕಾನೂನಿನ ಮುಂದೆ ತರಲಾಗುವುದು. ಕಾನೂನು ಮತ್ತು ಶಿಸ್ತುಪಾಲನೆಯಲ್ಲಿ ಕೇರಳ ಅಗ್ರ ಸ್ಥಾನದಲ್ಲಿದೆ. ಯಾವುದೇ ಒಂದು ವಿಭಾಗವನ್ನು ತುಷ್ಟೀಕರಿಸುವ ನಿಲುವು ಸರ್ಕಾರಕ್ಕಿಲ್ಲ. ಎಡ ವಿಚಾರಧಾರೆಗಳಿಗೆ ಜನರ ಹೃದಯದಲ್ಲಿ ಸ್ಥಾನವಿದೆ. ಸಿಪಿಎಂ ಅನ್ನಾಗಲಿ, ಎಡರಂಗವನ್ನಾಗಲಿ ತೊಡೆದು ಹಾಕಲು ಬಿಜೆಪಿ ಮತ್ತು ಕಾಂಗ್ರೆಸ್ ಸಹಿತ ಯಾವುದೇ ಪ್ರತಿಪಕ್ಷಗಳಿಗೆ ಸಾಧ್ಯವಿಲ್ಲ. ಈ ಶಕ್ತಿಗಳು ಪ್ರಜಾಪ್ರಭುತ್ವದ ಕಾವಲುಗಾರರಾದ ಕೆಲವು ಮಾಧ್ಯಮಗಳಿಗೆ ಆಮಿಷ ಒಡ್ಡಿ ತಮ್ಮ ಬಗಲಿಗೆ ಹಾಕಿ ಎಡರಂಗದ ವಿರುದ್ಧ ಪ್ರಚಾರಕ್ಕೆ ಇಳಿದಿವೆ' ಎಂದು ಆರೋಪಿಸಿದರು.

‌ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್ ಸ್ವಾಗತಿಸಿದರು. ಸಂಸದ ಪಿ. ಕರುಣಾಕರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೆ. ಕರುಣಾಕರನ್, ಸಿಪಿಎಂ ಶಾಸಕರಾದ ಕೆ.ಕುಂಞಿರಾಮನ್, ಎಂ. ರಾಜಗೋಪಾಲ್, ಮಾಜಿ ಶಾಸಕರಾದ ಕೆ.ವಿ.ಕುಂಞಿರಾಮನ್, ತ್ರಿಕರಿಪುರದ ಕೆ.ಕುಂಞಿರಾಮನ್, ಸಿ.ಎಚ್. ಕುಂಞಂಬು, ಕೆ.ಪಿ. ಸತೀಶ್ಚಂದ್ರನ್, ಹಿರಿಯ ನಾಯಕ ಎ.ಕೆ. ನಾರಾಯಣನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT