ತುರುವೇಕೆರೆ: ತಾಲ್ಲೂಕಿನ ಕಸಬಾ ಹೋಬಳಿಯ ಮುನಿಯೂರು ಗ್ರಾಮದ ಮೂಡಲಪಾಯ ಯಕ್ಷಗಾನ ಕಲಾವಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಾ.ನಾ. ದಾಸಾಚಾರ್ (71) ಶುಕ್ರವಾರ ನಿಧನರಾದರು.
ಇವರಿಗೆ ಪತ್ನಿ, ಒಬ್ಬ ಮಗ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಮೂಡಲಪಾಯದ ಭಾಗವತರಾಗಿ ದೆಹಲಿ, ಧರ್ಮಸ್ಥಳ, ಶಿವಮೊಗ್ಗ, ಕಲಬುರ್ಗಿ, ಮೈಸೂರು ಸೇರಿದಂತೆ ಹಲವೆಡೆ ಪ್ರದರ್ಶನ ನೀಡಿದ್ದರು. ಆಕಾಶವಾಣಿ ಕಲಾವಿದರಾಗಿಯೂ ಜನಪ್ರೀತಿ ಗಳಿಸಿದ್ದ ಇವರ ಪ್ರಸಂಗಗಳು ಪ್ರತಿ ವರ್ಷ ಆಕಾಶವಾಣಿಯಲ್ಲಿ ಬಿತ್ತರವಾಗುತ್ತಿದ್ದವು.
ವೃತ್ತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ದಾಸಾಚಾರ್ ಅವರ ಕಲಾಸೇವೆಗೆ ರಾಷ್ಟ್ರ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಿಂದಲೂ ನೂರಾರು ಪ್ರಶಸ್ತಿಗಳು ಸಂದಿವೆ.
ದಾಸಾಚಾರ್ ಅವರ ಅಂತ್ಯಕ್ರಿಯೆ ಮುನಿಯೂರಿನಲ್ಲಿ ಶುಕ್ರವಾರ ಸಂಜೆ ನಡೆಯಿತು.