ಸಾಗರ: ತಾಲ್ಲೂಕಿನ ತಾಳಗುಪ್ಪ ಸಮೀಪದ ಕಡವಿನಮನೆ ಗ್ರಾಮದ ತಿರುಮಲ ಶರ್ಮ ಅವರ ಮನೆಯಲ್ಲಿನ ಎಮ್ಮೆಗೆ ಶಸ್ತ್ರಚಿಕಿತ್ಸೆ ಮಾಡಿದಾಗ ಅದರ ಹೊಟ್ಟೆಯಲ್ಲಿ ಕಬ್ಬಿಣದ ತುಂಡುಗಳು, ಸಣ್ಣ ಚಾಕು, ನಾಣ್ಯ ಪತ್ತೆಯಾಗಿವೆ.
ಕೆಲವು ದಿನಗಳಿಂದ ಈ ಎಮ್ಮೆ ಯಾವುದೇ ಆಹಾರ ಸ್ವೀಕರಿಸಿರಲಿಲ್ಲ. ಈ ಸಂಬಂಧ ಶರ್ಮ ಅವರು ಪಶುವೈದ್ಯ ಇಲಾಖೆಯ ತಜ್ಞರನ್ನು ಸಂಪರ್ಕಿಸಿದರು.
ಡಾ.ದಯಾನಂದ, ಡಾ.ಶ್ರೀಧರ್, ರಾಘವೇಂದ್ರ , ಮಣಿಕಾಂತ್, ವಿನಯ, ಅಣ್ಣಾ ನಾಯ್ಕ್ ಅವರಿದ್ದ ತಂಡ ಎಮ್ಮೆಗೆ ಶಸ್ತ್ರ ಚಿಕಿತ್ಸೆ ಮಾಡಿದಾಗ ಅದರ ಹೊಟ್ಟೆಯಲ್ಲಿ ಕಬ್ಬಿಣದ ತುಂಡು ಸೇರಿದಂತೆ ಇತರ ಹಲವು ವಸ್ತುಗಳು ಇದ್ದುದು ಬೆಳಕಿಗೆ ಬಂದಿದೆ.
ಎಮ್ಮೆಗೆ ನೀಡಿರುವ ಹತ್ತಿ ಹಿಂಡಿಯಲ್ಲಿನ ಕಲಬೆರಕೆಯಿಂದ ಹೀಗಾಗಿದೆ ಎಂದು ಶಂಕಿಸಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಎಮ್ಮೆಯ ಆರೋಗ್ಯ ಸುಧಾರಿಸಿದೆ.