ಬೆಂಗಳೂರು:ಕೊಡಗಿನ ಪ್ರವಾಹ ಸಂತ್ರಸ್ತರನೆರವಿಗಾಗಿ ಆದಿಚುಂಚನಗಿರಿ ಮಠ ಭಾನುವಾರ ಆಯೋಜಿಸಿದ್ದ ‘ಕೊಡಗಿಗೆ ನಮ್ಮ ಕೊಡುಗೆ’– ಪರಿಸರ ಜಾಗೃತಿ ಜಾಥಾ ಹಾಗೂ ‘ಕೊಡಗಿಗೆ ಕೊಡುಗೆಗಾಗಿ ನಮ್ಮ ನಡಿಗೆ’ ಸಾಂತ್ವನ ಯಾತ್ರೆಯಲ್ಲಿ ಕೋಟ್ಯಂತರ ರೂಪಾಯಿ ದೇಣಿಗೆ ಹರಿದು ಬಂತು.
ಮಠದ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿಮಠದ ಆವರಣದಿಂದ ಮಾರುತಿ ಮಂದಿರದವರೆಗೆ ಪಾದಯಾತ್ರೆ ನಡೆಯಿತು. ಮಠಾಧೀಶರು, ಕ್ರೈಸ್ತ ಪಾದ್ರಿಗಳು, ಮೌಲ್ವಿಗಳು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಅತಿವೃಷ್ಟಿಯಿಂದ ಹಾನಿಯಾಗಿರುವ ಕೊಡಗನ್ನು ಪುನರ್ ನಿರ್ಮಿಸಬೇಕಾಗಿದೆ. ಅಲ್ಲಿನ ಜನತೆಯ ನೋವಿಗೆ ಸ್ಪಂದಿಸಬೇಕಿದೆ. ಜಾಥಾ ಕಾರ್ಯಕ್ರಮ ನಿಧಿ ಸಂಗ್ರಹಿಸುವುದಷ್ಟೇ ಅಲ್ಲ, ಜಾಗೃತಿ ಸಮಾವೇಶವೂ ಆಗಿದೆ’.
‘ಪ್ರಕೃತಿಯನ್ನು ವಿಕೃತಿಗೊಳಿಸದೆ, ಅದರ ಸಂರಕ್ಷಣೆಗೆ ಪಣತೊಡಬೇಕಿದೆ. ಇಷ್ಟು ದಿನಭೂತಾಯಿ ನಮ್ಮ ಕುಚೇಷ್ಟೆ, ಅಸಹನೆ ಸೇರಿದಂತೆ ಎಲ್ಲವನ್ನೂ ಸಹಿಸಿಕೊಂಡಿದ್ದಾಳೆ.ಕೊಡಗಿನ ಸ್ಥಿತಿಯಿಂದ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಪ್ರಕೃತಿಯನ್ನು ಉಳಿಸಿಕೊಳ್ಳದಿದ್ದರೆ ವಿಕೋಪಕ್ಕೆ ಕಾರಣರಾಗುತ್ತೇವೆ’ ಎಂದರು.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ‘ಕೊಡಗಿನ ಜನರಿಗಾಗಿ ಮನೆಗಳನ್ನು ಮರು ನಿರ್ಮಿಸಿ ಕೊಡಬಹುದು. ಆದರೆ, ಆಸ್ತಿ- ಪಾಸ್ತಿಯನ್ನು ಕೊಡಲಾಗದು’ ಎಂದರು.
**
ಕೊಡಗಿನಲ್ಲೂ ಪಾದಯಾತ್ರೆ
‘ಕೊಡಗಿನಲ್ಲಿ ಪಾದಯಾತ್ರೆ ಕೈಗೊಳ್ಳುವ ಕುರಿತು ಕೆಲವು ಮಠಾಧೀಶರು ಪ್ರಸ್ತಾಪಿಸಿದ್ದಾರೆ’ ಎಂದುನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
‘ಶೀಘ್ರವೇ ಈ ಬಗ್ಗೆ ಚರ್ಚಿಸಿ, ಸಂತ್ರಸ್ತರ ನೆರವಿಗೆಧಾವಿಸಲಿದ್ದೇವೆ’ ಎಂದು ತಿಳಿಸಿದರು.
**
ಭಿಕ್ಷಾಟನೆ ಮೂಲಕ ದವಸ ಧಾನ್ಯ, ಹಣ ಸಂಗ್ರಹ ಮಾಡುತ್ತಿದ್ದೇವೆ. ದಲಿತ, ಹಿಂದುಳಿದ ಮಠಾಧೀಶರೆಲ್ಲ ಸೇರಿ ಕೈಲಾದಷ್ಟು ನೆರವು ನೀಡಲಿದ್ದೇವೆ.