ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಮನೆಗಳ ಮೇಲೆ ಐ.ಟಿ ದಾಳಿ ಮುಂದುವರಿದಿದ್ದು, ಖಾನಾಪುರ ಜೆಡಿಎಸ್ ಅಭ್ಯರ್ಥಿ ನಾಸಿರ್ ಬಾಗವಾನ್ ಹಾಗೂ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಆರ್. ಉಮೇಶ್ ಅವರ ಚಾಮರಾಜ ನಗರದ ಮನೆಗಳನ್ನು ಶೋಧಿಸಲಾಗಿದೆ.
ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದ ಮನೆ, ಹುಬ್ಬಳ್ಳಿ ವಿದ್ಯಾನಗರದ ಮನೆ, ಅರವಿಂದ ನಗರದ ಕಚೇರಿ ಮೇಲೆ ಏಕಕಾಲಕ್ಕೆ ಐ.ಟಿ ದಾಳಿ ನಡೆದಿದೆ. ಮೂರು ವಾಹನಗಳಲ್ಲಿ ಬಂದಿದ್ದ ಅಧಿಕಾರಿಗಳು ದಾಖಲೆ ಪತ್ರಗಳನ್ನು ಶೋಧಿಸಿದ್ದಾರೆ.
ನಾಸಿರ್ ತಮ್ಮ ನಾಮಪತ್ರದಲ್ಲಿ ₹191ಕೋಟಿ ಆಸ್ತಿ ಘೋಷಿಸಿದ್ದರು. ನಾಮಪತ್ರ ಸಲ್ಲಿಕೆಯಾದ ಬೆನ್ನಲ್ಲೇ ದಾಳಿ ನಡೆದಿದೆ.
ಇದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಪ್ತರೆನ್ನಲಾದ ಉಮೇಶ್ ಅವರ ಚಾಮರಾಜನಗರದ ಮನೆಯನ್ನೂ ಶೋಧಿಸಲಾಗಿದೆ. ಆಸ್ತಿ ಹಾಗೂ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.