ಬೆಂಗಳೂರು:ಕೋಲಾರ ಜಿಲ್ಲೆ ಚನ್ನಕಲ್ ಗ್ರಾಮದಲ್ಲಿ ಅಸ್ಪೃಶ್ಯತೆಯ ಬೇರು ಜೀವಂತವಾಗಿರುವುದನ್ನು ರಾಜ್ಯ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ.
‘ಪ್ರಜಾವಾಣಿ’ ಭಾನುವಾರ ‘ಚನ್ನಕಲ್: ಅಸ್ಪೃಶ್ಯತೆಯ ಬೇರು ಜೀವಂತ’ ಎಂಬ ವರದಿ ಪ್ರಕಟಿಸಿತ್ತು. ಸಮಾಜದಲ್ಲಿ ಇನ್ನೂ ಬೇರೂರಿದ್ದ ಪಿಡುಗಿನ ಕುರಿತು ಸರ್ಕಾರದ ಗಮನಸೆಳೆಯುವ ಪತ್ರಿಕೆಯ ಪ್ರಯತ್ನಕ್ಕೆ ಸಮಿತಿಯ ರಾಜ್ಯಘಟಕದ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಗ್ರಾಮದ ಎಲ್ಲ ಸಮುದಾಯಗಳಿಗೆ ಸಮರ್ಪಕವಾಗಿ ನೀರಿನ ಸೌಲಭ್ಯ ಒದಗಿಸಿ,ದಲಿತ ಹೆಣ್ಣುಮಕ್ಕಳಿಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿರುವ ಪುಂಡರನ್ನು ಬಂಧಿಸಬೇಕು.ಗ್ರಾಮದಲ್ಲಿಅಸ್ಪೃಶ್ಯತೆ ಮಾಡುವವರ ವಿರುದ್ಧ ಸರ್ಕಾರ ಸ್ವಯಂಪ್ರೇರಿತ ದೂರು ದಾಖಲಿ ಸಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ಅಹಿಂದ ಹೋರಾಟ ಸಮಿತಿ, ‘ದುರ್ಬಲರನ್ನು ರಕ್ಷಿಸಬೇಕಾದ ಸರ್ಕಾರ ಹಾಗೂ ಪ್ರಾಧಿಕಾರಗಳ ನೆರಳಿನಲ್ಲಿಯೇ ಇಂತಹ ದೌರ್ಜನ್ಯಗಳು ನಡೆಯುತ್ತಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದೆ.
ಪತ್ರಿಕೆಗೆ ಅಭಿನಂದನೆ: ವರದಿ ಪ್ರಕಟಿಸಿದ ಪತ್ರಿಕೆಗೆ ಅಹಿಂದ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಮುತ್ತುರಾಜು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
‘ಅಸ್ಪೃಶ್ಯತೆ ಬಗೆಗಿನ ಸತ್ಯವನ್ನುಎಳೆಎಳೆಯಾಗಿ ಬಿಚ್ಚಿಡುತ್ತಿರುವ ಪತ್ರಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕರಾಳ ಸತ್ಯಗಳನ್ನು ಬೆಳಕಿಗೆ ತರಲಿ’ ಎಂದು ಸಮಿತಿ ಸದಸ್ಯ ತುಳಸಿರಾಮ್ ಆಶಿಸಿದ್ದಾರೆ.