ಬೆಂಗಳೂರು: ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ವೃದ್ಧ ದಂಪತಿಯನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿದ್ದು, ಸಂಬಂಧಿಕರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ನಿವೃತ್ತ ಸರ್ಕಾರಿ ಉದ್ಯೋಗಿ ಗೋವಿಂದಪ್ಪ (65) ಹಾಗೂ ಅವರ ಪತ್ನಿ ಶಾಂತಮ್ಮ (55) ಕೊಲೆಯಾದವರು.
‘ಕೆಲ ವರ್ಷಗಳ ಹಿಂದಷ್ಟೇ ನಿವೃತ್ತರಾಗಿದ್ದ ಗೋವಿಂದಪ್ಪ, ಪತ್ನಿ ಹಾಗೂ ಮಗನ ಜೊತೆ ಜೆ.ಪಿ.ನಗರದ ಆರ್ಬಿಐ ಲೇಔಟ್ನ ಮನೆಯಲ್ಲಿ ವಾಸವಿದ್ದರು. ಭಾನುವಾರ ಸಂಜೆ ಮಗ ಹೊರಗಡೆ ಹೋಗಿದ್ದ ವೇಳೆಯಲ್ಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ ದಂಪತಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಆಸ್ತಿ ಹಂಚಿಕೆ ಹಾಗೂ ಹಣಕಾಸು ವ್ಯವಹಾರ ಸಂಬಂಧ ಕುಟುಂಬದಲ್ಲೇ ಮನಸ್ತಾಪ ಇರುವ ಮಾಹಿತಿ ಸಿಕ್ಕಿದೆ. ಸಂಬಂಧಿಕರೇ ಈ ಕೊಲೆ ಮಾಡಿರುವ ಅನುಮಾನವಿದೆ. ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು, ಹಲವು ಮಾಹಿತಿಯನ್ನೂ ಈಗಾಗಲೇ ಕಲೆಹಾಕಲಾಗಿದೆ’ ಎಂದು ಪೊಲಿಸರು ಹೇಳಿದರು.
ಮಗನ ನಾಪತ್ತೆ: ‘ಘಟನೆ ನಡೆಯುವುದಕ್ಕೂ ಮುನ್ನವೇ ಮಗ ಕೆಲಸ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದಾನೆ. ಆತ ಸದ್ಯ ನಾಪತ್ತೆಯಾಗಿದ್ದಾನೆ. ಆತನ ಮೇಲೂ ಅನುಮಾನ ಇದೆ’ ಎಂದು ಪೊಲೀಸರು ಹೇಳಿದರು.