ಕಲಬುರ್ಗಿ: ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕೆಲ ಕಡೆ ಉತ್ತಮ ಮಳೆಯಾಗಿದೆ.
ರಾಯಚೂರು ಜಿಲ್ಲೆ ಮಸ್ಕಿತಾಲ್ಲೂಕಿನ ಸಂತೆಕೆಲ್ಲೂರು, ಮಟ್ಟೂರು ಸುತ್ತಮುತ್ತ ಶುಕ್ರವಾರ ರಾತ್ರಿ ಭಾರಿ ಮಳೆಯಾಗಿದೆ. ಸಂತೆ ಕೆಲ್ಲೂರು ಸಮೀಪದ ಗಡ್ಡಿ ಹಳ್ಳ ತುಂಬಿ ಹರಿಯತೊಡಗಿದ್ದು ಹೆದ್ದಾರಿ ಸಂಪರ್ಕ ಸೇತುವೆ ಮುಳುಗಿದೆ. ಇದರ ಮಧ್ಯೆಯೂ ಕೆಲ ಬಸ್, ಲಾರಿಗಳು ಸಂಚರಿಸಿದವು.
ಮಳೆಯಿಂದ ಕೊಪ್ಪಳದ ಹಿರೇಹಳ್ಳ ಜಲಾಶಯ ಭರ್ತಿಯಾಗಿದ್ದು, ಐದು ಗೇಟ್ಗಳ ಮೂಲಕ 5 ಸಾವಿರ ಕ್ಯುಸೆಕ್ ನೀರು ಹಳ್ಳಕ್ಕೆ ಬಿಡಲಾಗಿದೆ. ಹೆಚ್ಚುವರಿ ನೀರನ್ನು ಗಿಣಗೇರಾ ಕೆರೆ ಕಡೆಗೆ ಹರಿಸಲಾಗುತ್ತಿದೆ.
ಕೊಪ್ಪಳ ಜಿಲ್ಲೆಯ 100 ಹೆಕ್ಟೇರ್ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಸಜ್ಜೆ, ಶೇಂಗಾ, ಭತ್ತ, ಮುಸುಕಿನ ಜೋಳ, ಮೆಕ್ಕೆ ಜೋಳ ಸೇರಿ ವಿವಿಧ ಬೆಳೆಗಳು ನೆಲಕಚ್ಚಿವೆ. ಯಲಬುರ್ಗಾ, ಕುಷ್ಟಗಿ ಮತ್ತು ಕೊಪ್ಪಳದಲ್ಲಿ ಜಮೀನುಗಳ ಒಡ್ಡು ಕೊಚ್ಚಿ ಹೋಗಿವೆ.
ಕೊಳೂರ ಬಾಂದಾರ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಬಾಂದಾರದ ಪಕ್ಕದ ಮಣ್ಣು ಕುಸಿಯುತ್ತಿದ್ದು, ಹೆಚ್ಚಿನ ಮಳೆಯಾದರೆ ಹಾನಿಯಾಗುವ ಸಂಭವವಿದೆ. ಗಂಗಾವತಿಯಲ್ಲಿ ಕೆಲ ಮನೆಗಳಿಗೆ ಹಾನಿಯಾಗಿದೆ.