ಕೊಪ್ಪಳ ಲೋಕಸಭಾ ಕ್ಷೇತ್ರ ಅತ್ಯಂತ ವಿಶಿಷ್ಟವಾದದು. 1952 ಸ್ವತಂತ್ರ ಭಾರತದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಶಿವಮೂರ್ತಿ ಸ್ವಾಮಿ ಅಳವಂಡಿ ಅವರನ್ನು ಗೆಲ್ಲಿಸುವುದರ ಮೂಲಕ ಕಾಂಗ್ರೆಸ್ ಅಲೆಗೆ ವಿರುದ್ಧವಾಗಿ ಮತ ಚಲಾಯಿಸಿ ಪ್ರಜ್ಞಾವಂತಿಕೆ ಮೆರೆದ ಕ್ಷೇತ್ರ.
2008ರಲ್ಲಿ ಮತಕ್ಷೇತ್ರ ಮರುವಿಂಗಡಣೆಯಲ್ಲಿ ಹೊಸಪೇಟೆ ಮತ್ತು ಮುಂಡರಗಿಯನ್ನು ಕೈಬಿಟ್ಟು ಸಿರಗುಪ್ಪ, ಮಸ್ಕಿ, ಸೇರ್ಪಡೆಗೊಳಿಸಲಾಯಿತು. ಆರಂಭದಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಮಧ್ಯೆ ಇದ್ದ ಸ್ಪರ್ಧೆ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ ಇದ್ದು, ಜೆಡಿಎಸ್ಗೆ ನೆಲೆ ಇಲ್ಲ.
ಸಂಸದ ಬಿಜೆಪಿಯ ಸಂಗಣ್ಣ ಕರಡಿ ಮತ್ತೆ ಸ್ಪರ್ಧಿಸುವ ತಯಾರಿಯಲ್ಲಿದ್ದು, ಕ್ಷೇತ್ರದಲ್ಲಿ ವಿರೋಧ ಇಲ್ಲದಿದ್ದರೂ ಅಭ್ಯರ್ಥಿ ಬದಲಾವಣೆಗೆ ವರಿಷ್ಠರು ನಿರ್ಧಾರ ತಳೆದಿದ್ದಾರೆ ಎನ್ನಲಾಗುತ್ತಿದೆ.