ಬೆಂಗಳೂರು: ‘2015ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಇದೇ 2ರಿಂದ (ಶುಕ್ರವಾರ) ನಡೆಸಲಿರುವ ಸಂದರ್ಶನದಲ್ಲಿ ಪರಿಷ್ಕೃತ ಪಟ್ಟಿ ಅನುಸಾರ ಹೊಸದಾಗಿ ಸೇರ್ಪಡೆಗೊಂಡಿರುವ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಬಾರದು’ ಎಂದು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶಿಸಿದೆ.
ಈ ಕುರಿತ ಅರ್ಜಿಯನ್ನು ಕೆಎಟಿ ಅಧ್ಯಕ್ಷ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಅವರಿದ್ದ ನ್ಯಾಯಪೀಠ, ಗುರುವಾರ ವಿಚಾರಣೆ ನಡೆಸಿ ಕೆಪಿಎಸ್ಸಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ವಿಚಾರಣೆಯನ್ನು ಇದೇ 13ಕ್ಕೆ ಮುಂದೂಡಲಾಗಿದೆ.
ಪಟ್ಟಿಯಿಂದ ಹೊರಗುಳಿದ ಅಭ್ಯರ್ಥಿಗಳು ಈ ಅರ್ಜಿ ಸಲ್ಲಿಸಿದ್ದು, ‘ಸಂದರ್ಶನವನ್ನು 1:5ರ ಅನುಪಾತದಲ್ಲಿ ನಡೆಸುವುದರಿಂದ ಹೊಸ ಪಟ್ಟಿಯಲ್ಲಿ ಹಲವು ಮಂದಿ ಸ್ಥಾನ ಪಡೆದಿದ್ದಾರೆ. ಅವರ ಸಂದರ್ಶನಕ್ಕೆ ಅವಕಾಶ ನೀಡದಂತೆ ಆದೇಶಿಸಬೇಕು’ ಎಂದು ಕೋರಿದ್ದಾರೆ.
ಈ ಮೊದಲು ಕೆಪಿಎಸ್ಸಿ ಪ್ರಕಟಿಸಿದ್ದ ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳ ಪಟ್ಟಿಯಿಂದ 126 ಮಂದಿಯನ್ನು ಕೈಬಿಡಲಾಗಿತ್ತು. ಜುಲೈ 16ರಂದು ಪರಿಷ್ಕೃತ ಪಟ್ಟಿ ಪ್ರಕಟಿಸಲಾಗಿತ್ತು.