ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು) ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರ ಅಧಿಕಾರ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ.
ಮೂರು ವರ್ಷಗಳ ಅವಧಿಗೆ ಕುಲಪತಿಯಾಗಿ ನೇಮಕಗೊಂಡಿದ್ದ ಪ್ರೊ.ಶಿವಲಿಂಗಯ್ಯ ಅಧಿಕಾರ ಅವಧಿಯು ಮಾರ್ಚ್ 10ಕ್ಕೆ ಕೊನೆಗೊಂಡಿತ್ತು. ಅವಧಿ ವಿಸ್ತರಿಸುವಂತೆ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಸೋಮವಾರ ರಾಜ್ಯಪಾಲರ ಕಚೇರಿಯಿಂದ ಆದೇಶ ಹೊರಬಿದ್ದಿದೆ.
2013–14ನೇ ಸಾಲಿನಿಂದ ಕೆಎಸ್ಒಯುಗೆ ‘ಯುಜಿಸಿ’ ಮಾನ್ಯತೆ ರದ್ದಾಗಿತ್ತು. ವಿ.ವಿ.ಗೆ ಮರಳಿ ಮಾನ್ಯತೆ ದೊರಕಿಸಿಕೊಡಲು ಶ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಸೇವೆಯನ್ನು ಪರಿಗಣಿಸಿ ನೂತನ ಕುಲಪತಿ ನೇಮಕವಾಗುವವರೆಗೆ ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.