ಬೆಂಗಳೂರು: ಸುದೀರ್ಘ ಲಾಕ್ಡೌನ್ ಬಳಿಕ ಮಂಗಳವಾರದಿಂದ ರಾಜ್ಯದಾದ್ಯಂತ ಸಾರ್ವಜನಿಕ ಸಾರಿಗೆ ಬಸ್ಗಳು ರಸ್ತೆಗಿಳಿಯಲಿವೆ. ರಾಜ್ಯದೊಳಗೆ ಮಾತ್ರ ಸಂಚಾರಕ್ಕೆ ಅವಕಾಶವಿದ್ದು, ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಬಸ್ ಸೇವೆ ಸಿಗಲಿದೆ. 1,500 ಅಂದರೆ, ಶೇ 25ರಷ್ಟು ಬಸ್ಗಳು ಮಾತ್ರ ಸಂಚರಿಸಲಿವೆ.
ಹವಾನಿಯಂತ್ರಿತ ಬಸ್ಗಳಲ್ಲಿ ಕೊರೊನಾ ಹರಡುವ ಆತಂಕ ಇರುವುದರಿಂದ ಈ ಬಸ್ಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ.ಸಾಮಾನ್ಯ, ವೇಗದೂತ, ರಾಜಹಂಸ, ನಾನ್ ಎಸಿ (ಹವಾನಿಯಂತ್ರಿತವಲ್ಲದ) ಬಸ್ಗಳು ಕಾರ್ಯಾಚರಣೆಗಿಳಿಯಲಿದ್ದು, ಷರತ್ತುಬದ್ಧ ಸೇವೆ ನೀಡಲಾಗುವುದು ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
‘ಎಲ್ಲ ಬಸ್ಗಳು ಕೆಂಪೇಗೌಡ ನಿಲ್ದಾಣದಿಂದಲೇ (ಮೆಜೆಸ್ಟಿಕ್) ಹೊರಡಲಿವೆ. ಪ್ರಯಾಣಿಕರು ಇಲ್ಲಿಯೇ ಥರ್ಮಲ್ ಸ್ಕ್ರೀನಿಂಗ್ಗೆ ಒಳಗಾಗಿ ಬಸ್ ಹತ್ತಬೇಕು’ ಎಂದು ನಿಗಮ ಹೇಳಿದೆ.
ಬುಕ್ಕಿಂಗ್ ಆರಂಭ: ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳ ಸಂಚಾರಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ಇತ್ತ ಆಸನಗಳ ಕಾಯ್ದಿರಿಸುವಿಕೆ ಪ್ರಕ್ರಿಯೆಯೂ ಪ್ರಾರಂಭವಾಗಿದೆ.
ನಗರದಿಂದ ವಿವಿಧ ಊರುಗಳಿಗೆ ಹಾಗೂ ಬೇರೆ ಬೇರೆ ಊರುಗಳಿಂದ ನಗರಕ್ಕೆ ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸುತ್ತಿದ್ದಾರೆ. ರೆಡ್ಬಸ್ ಆನ್ಲೈನ್ ಬುಕ್ಕಿಂಗ್ಸೇವೆ ಸೋಮವಾರ ರಾತ್ರಿಯಿಂದಲೇ ಆರಂಭವಾಗಿದೆ ಎಂದು ನಿಗಮ ಹೇಳಿದೆ.
ಬೆಂಗಳೂರಿನಿಂದ ರಾಜ್ಯದ ಪ್ರಮುಖ ನಗರ, ಪಟ್ಟಣಗಳಿಗೆ ತೆರಳಲು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು. ಮಾಹಿತಿಗೆ, ಕೆಎಸ್ಆರ್ಟಿಸಿ ವೆಬ್ಸೈಟ್www.ksrtc.in ಅಥವಾ 94495 96666 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು.