ಸಮಿತಿಯ ನಿರ್ಧಾರವನ್ನು ಬುಧವಾರ ವಿಧಾನಸಭೆಗೆ ತಿಳಿಸಿರುವ ಶಂಕರ್ ಅವರು, ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವ ಸಾವಿರಾರು ಜನರಿಗೆ ಸಮಸ್ಯೆಯುಂಟುಮಾಡಬಲ್ಲ ಮತ್ತು ಅಭಿವೃದ್ಧಿಗೆ ತೊಡಕಾಗುವಂತಹ ವರದಿಯನ್ನು ತಿರಸ್ಕರಿಸುವಂತೆ ಸಚಿವ ಸಂಪುಟವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.
‘ನನ್ನ ನೇತೃತ್ವದ ಉಪ ಸಮಿತಿಯು ಕಸ್ತೂರಿ ರಂಗನ್ ವರದಿಯ ಶಿಫಾರಸುಗಳನ್ನು ತಿರಸ್ಕರಿಸುವ ನಿರ್ಧಾರ ಕೈಗೊಂಡಿದೆ. ಈ ವಿಚಾರವನ್ನು ಶೀಘ್ರದಲ್ಲೇ ಸಚಿವ ಸಂಪುಟದ ಮುಂದಿರಿಸಲಾಗುವುದು. ವರದಿಯನ್ನು ಅನುಷ್ಠಾನಗೊಳಿಸಲು ಬಯಸುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಈ ಹಿಂದೆಯೂ ಕರ್ನಾಟಕ ಸರ್ಕಾರ ವರದಿಯನ್ನು ತಿರಸ್ಕರಿಸಿತ್ತು. ಆದರೆ, ಅದನ್ನು ಮಾನ್ಯ ಮಾಡದ ಕೇಂದ್ರ ಸರ್ಕಾರ ನಾಲ್ಕನೇ ಬಾರಿ ಸುತ್ತೋಲೆ ಹೊರಡಿಸಿತ್ತು’ ಎಂದು ಸಚಿವ ಶಂಕರ್ ಮಾಹಿತಿ ನೀಡಿದ್ದಾರೆ.