ಮಂಡ್ಯ: ‘ರಾಜ್ಯದಲ್ಲಿ 12 ಲಕ್ಷ ಜನಸಂಖ್ಯೆ ಇರುವ ಕುಳುವ ಸಮುದಾಯ ಅಭಿವೃದ್ಧಿ ಹಾಗೂ ಅವಕಾಶಗಳಿಂದ ವಂಚಿತವಾಗಿದೆ. ಹೀಗಾಗಿ, ಸರ್ಕಾವು ಕುಳುವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು’ ಎಂದು ಕುಳುವ ಮಹಾಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಗೋಪಾಲ್ ಒತ್ತಾಯಿಸಿದರು.
ಅಖಿಲ ಕರ್ನಾಟಕ ಕುಳುವ ಮಹಾಸಂಘದ ವತಿಯಿಂದ ಇಲ್ಲಿ ನಡೆದ ರಾಜ್ಯಮಟ್ಟದ ಕೊರವಂಜಿ ಸಾಂಸ್ಕೃತಿಕ ಉತ್ಸವ ಹಾಗೂ ಕುಳುವ ಜನಾಂಗದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
‘ಕುಳುವ ಸಮುದಾಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ನಮ್ಮ ಸಮುದಾಯದ ಜನರು ಬಿದಿರಿನ ಬುಟ್ಟಿ ಹೆಣೆಯುವ, ಹಂದಿ ಸಾಕಣೆ, ಬಾಜಾ ಭಜಂತ್ರಿ ಬಾರಿಸುವ ಹಾಗೂ ಅಲೆಮಾರಿ ಜನಾಂಗವೂ ಆಗಿದೆ. ಕುಳುವ, ಕೊರಚ, ಕೊರವ ಎಂಬ ವಿವಿಧ ಹೆಸರಿನಿಂದ ಗುರುತಿಸಲಾಗುತ್ತಿದೆ. ಬಜೆಟ್ನಲ್ಲಿ ಕುಳುವ ಸಮುದಾಯದ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. ಕೂಡಲೇ ಎಸ್ಸಿಪಿ ಯೋಜನೆಯ ಹಣದಲ್ಲಿ ₹ 2 ಸಾವಿರ ಕೋಟಿ ಅನುದಾನವನ್ನು ಕುಳುವ ಸಮುದಾಯಕ್ಕೆ ಮೀಸಲಿಡಬೇಕು’ ಎಂದು ಆಗ್ರಹಿಸಿದರು.
ನುಲಿಯ ಚಂದಯ್ಯ ಜಯಂತಿಯನ್ನು ಆ.27ರಂದು ಸರ್ಕಾರದ ವತಿಯಿಂದ ರಜಾರಹಿತ ದಿನವಾಗಿ ಆಚರಣೆ ಮಾಡಬೇಕು. ಜಿಲ್ಲೆ, ತಾಲ್ಲೂಕು ಕೇಂದ್ರದಲ್ಲಿ ಕುಳುವ ಭವನ ನಿರ್ಮಿಸಬೇಕು. ಕುಳುವ ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ಬಜೆಟ್ನಲ್ಲಿ ಕುಳುವ ಅಭಿವೃದ್ಧಿಗೆ ₹ 1,500 ಕೋಟಿ ಅನುದಾನ ಕೊಡಬೇಕು ಎಂದು ಬೇಡಿಕೆ ಮಂಡಿಸಿದರು.
‘ಅಲೆಮಾರಿ ಆಯೋಗ ರಚನೆ ಮಾಡಬೇಕು. ಕುಳುವ ಸಮುದಾಯದಿಂದ ಇಬ್ಬರು ವಿಧಾನ ಪರಿಷತ್ ಸದಸ್ಯರನ್ನು ನೇಮಕ ಮಾಡಬೇಕು. ಸನಾದಿ ಅಪ್ಪಣ್ಣನವರ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡಬೇಕು. ಮಂಡ್ಯದಲ್ಲಿ ಸಮುದಾಯಭವನ ನಿರ್ಮಾಣಕ್ಕೆ ಅರ್ಧ ಎಕರೆ ನಿವೇಶನ, ₹ 5 ಕೋಟಿ ಅನುದಾನ ನೀಡಬೇಕು’ ಎಂದು ಮನವಿ ಸಲ್ಲಿಸಿದರು.
ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ, ‘ಬೇಡಿಕೆಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸಿ ಈಡೇರಿಸಲು ಶ್ರಮಿಸುತ್ತೇನೆ. ಚಿಕ್ಕಮಗಳೂರಿನಲ್ಲಿ ನುಲಿಯ ಚಂದಯ್ಯ ಮಠ ನಿರ್ಮಾಣಕ್ಕೆ ₹ 25 ಲಕ್ಷಕ್ಕೂ ಹೆಚ್ಚು ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಶಾಸಕ ಎಂ.ಶ್ರೀನಿವಾಸ್, ‘ಕುಳುವ ಸಮುದಾಯಭವನಕ್ಕೆ ನಗರಸಭೆ ವತಿಯಿಂದ 100 ಚದರ ಅಡಿಯ ನಿವೇಶನ ನೀಡಿ, ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು’ ಎಂದು ತಿಳಿಸಿದರು.
ನಂದಿ ಕ್ಷೇತ್ರದ ಕುಳುವ ಪೀಠದ ಅಧ್ಯಕ್ಷ ವೃಷಭೇಂದ್ರ ಸ್ವಾಮೀಜಿ, ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಆನಂದ್, ಸದಸ್ಯ ಕೃಷ್ಣಪ್ರಸಾದ್, ವಿವಿಧ ರಾಜ್ಯಗಳ ಅಧ್ಯಕ್ಷರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.