ಮಂಡ್ಯ: ಜೆಡಿಎಸ್ ಮುಖಂಡ ಪ್ರಕಾಶ್ ಅವರ ಕೊಲೆ ನಡೆದ ದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿದ ಶೂಟೌಟ್ ಹೇಳಿಕೆಗೆ ತೊಪ್ಪನಹಳ್ಳಿ ಗ್ರಾಮಸ್ಥರು ಭಯಭೀತರಾಗಿದ್ದು, 23 ಕುಟುಂಬಗಳು ಊರು ತೊರೆದಿವೆ.
ಗ್ರಾಮ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಪೊಲೀಸ್ ಸಿಬ್ಬಂದಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ. ನಿಷೇಧಾಜ್ಞೆ ಕಾರಣ ಬಂದ್ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಟುಂಬಗಳು ಊರು ತೊರೆಯಲು ಮುಖ್ಯಮಂತ್ರಿಗಳ ಶೂಟೌಟ್ ಹೇಳಿಕೆಯೇ ಕಾರಣ ಎಂದು ಮೂಲಗಳು ತಿಳಿಸಿವೆ.
‘ಗ್ರಾಮದ ಜನರು ಭಯಭೀತರಾಗಿರುವುದು ನಿಜ, ಆದರೆ ಊರು ತೊರೆದಿರುವ ವಿಚಾರ ತಿಳಿದಿಲ್ಲ. ಆರೋಪಿಗಳ ಬಂಧನ ಕುರಿತು ಗುರುವಾರ ಮಾಹಿತಿ ನೀಡುತ್ತೇನೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ತಿಳಿಸಿದರು.