ಮೈಸೂರು: ‘ದಕ್ಷಿಣದ ಪ್ರಯಾಗ’ ಎಂದೇ ಪ್ರಸಿದ್ಧಿ ಪಡೆದಿರುವ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಕುಂಭಮೇಳಕ್ಕೆ ಭಾನುವಾರ ಚಾಲನೆ ಲಭಿಸಿದ್ದು, ಮೊದಲ ದಿನವೇ ಭಕ್ತರು ನದಿಯಲ್ಲಿ ಮಿಂದೆದ್ದರು.
ಕಾವೇರಿ–ಕಪಿಲ–ಸ್ಫಟಿಕ ಸರೋವರಗಳ ಸಂಗಮದ ಪುಣ್ಯಕ್ಷೇತ್ರದತ್ತ ವಿವಿಧೆಡೆಯಿಂದ ಮಠಾಧೀಶ್ವರು, ಸಾಧು ಸಂತರು, ಭಕ್ತರು ಬರುತ್ತಿದ್ದು ವಿವಿಧ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು.
ನದಿಯ ಮಧ್ಯ ಭಾಗದಲ್ಲಿ ನಿರ್ಮಿಸಿರುವ ಯಾಗ ಮಂಟಪದಲ್ಲಿ ಹೋಮ–ಹವನ, ಪೂಜಾ ಕೈಂಕರ್ಯ, ವೇದಘೋಷದ ಜೊತೆಗೆ ಸಾಂಸ್ಕೃತಿಕ ವೈಭವ ಮೇಳೈಸಿತು.
ಅಗಸ್ತ್ಯೇಶ್ವರ ಸ್ವಾಮಿಗೆ ದೇವಾ ಅನುಜ್ಞಾ ಪೂಜೆ ನೆರವೇರಿಸುವ ಮೂಲಕ ಮೇಳವನ್ನು ಉದ್ಘಾಟಿಸಲಾಯಿತು. ತಿರುಚ್ಚಿ ಸಂಸ್ಥಾನ ಮಠದ ಜಯೇಂದ್ರ ಸರಸ್ವತಿ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸೋಮನಾಥ ಸ್ವಾಮೀಜಿ ಪೂಜೆ ನೆರವೇರಿಸಿದರು.
ಬೆಳಿಗ್ಗೆಯಿಂದ ರಾತ್ರಿವರೆಗೆ ಸಾವಿರಾರು ಮಂದಿ ಸ್ನಾನ ಮಾಡಿ ಪುನೀತರಾದರು. ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಹೋದಯ ಪುಣ್ಯಕಾಲದ ಮಹಾಮಾಘ ಸ್ನಾನ ಕೊನೆಯ ದಿನವಾದ ಮಂಗಳವಾರ ನಡೆಯಲಿದೆ.