ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ

ಮೂರು ದಿನ ಧಾರ್ಮಿಕ ಚಟುವಟಿಕೆ: ಲಕ್ಷಾಂತರ ಭಕ್ತರು ಭಾಗಿ ನಿರೀಕ್ಷೆ
Last Updated 16 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಮೈಸೂರು: ಉತ್ತರ ಭಾರತದ ಗಂಗೆ– ಯಮುನೆ– ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮದಲ್ಲಿ ಕೋಟ್ಯಂತರ ಜನ ಮಿಂದೇಳುತ್ತಿದ್ದಾರೆ. ಇತ್ತ ದಕ್ಷಿಣದ ಪವಿತ್ರ ನದಿಗಳಾದ ಕಾವೇರಿ– ಕಪಿಲ– ಸ್ಫಟಿಕ ಸಂಗಮದಲ್ಲೂ ಪುಣ್ಯಸ್ನಾನಕ್ಕೆ ವೇದಿಕೆ ಸಿದ್ಧಗೊಂಡಿದೆ.

ತಿ.ನರಸೀಪುರ ಪಟ್ಟಣದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಫೆ. 17ರಿಂದ ಮೂರು ದಿನ ಕುಂಭಮೇಳ ಆಯೋಜಿಸಲಾಗಿದೆ.

ದಕ್ಷಿಣ ಭಾರತದ ಕುಂಭಮೇಳ ಕ್ಷೇತ್ರವೆಂದೇ ಇದು ಪ್ರಸಿದ್ಧಿ ಪಡೆದಿದ್ದು, ಧಾರ್ಮಿಕ ಸಭೆಗಳು ಹಾಗೂ ಯಜ್ಞ ಯಾಗಾದಿಗಳು ನಡೆಯಲಿವೆ. ‌1989ರಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಆಯೋಜಿಸುತ್ತಿದ್ದು, ಈ ಬಾರಿ ನಡೆಯುತ್ತಿರುವುದು 11ನೆಯದು. ಮೂರನೇ ದಿನ ಮಹೋದಯ ಪುಣ್ಯಕಾಲದ ಮಹಾಮಾಘ ಸ್ನಾನವಿರುವುದರಿಂದ ಮಠಾಧೀಶರು, ಸಾಧು ಸಂತರು ಸೇರಿದಂತೆ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.

ತಾತ್ಕಾಲಿಕ ಸೇತುವೆ: ಸಂಗಮದ ಮಧ್ಯಭಾಗದಲ್ಲಿರುವ ನಡುಹೊಳೆ ಬಸವೇಶ್ವರ ಸ್ವಾಮಿ ದರ್ಶನ ಪಡೆಯಲು ಮರಳಿನ ಮೂಟೆ ಬಳಸಿ ಪ್ರತ್ಯೇಕವಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದೆ.

ಗುಂಜಾನರಸಿಂಹಸ್ವಾಮಿ ದೇಗುಲದ ಸೋಪಾನಕಟ್ಟೆಯಿಂದ ತ್ರಿವೇಣಿ ಸಂಗಮದ ಧಾರ್ಮಿಕ ಸಭೆ ನಡೆಯುವ ಸ್ಥಳದವರೆಗೆ ಕಪಿಲಾ ನದಿಗೆ ಅಡ್ಡಲಾಗಿ ತೇಲುವ ಸೇತುವೆ ನಿರ್ಮಿಸಲಾಗಿದೆ.

ಮೂರು ದಿನಗಳ ಕಾರ್ಯಕ್ರಮ

ಫೆ.17: ಹೋಮ, ಧರ್ಮಸಭೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ

ಫೆ.18: ನದಿಪಾತ್ರದಲ್ಲಿ ಪುಣ್ಯಾಹ, ಹೋಮ, ಧರ್ಮಸಭೆ, ಮಹಾಮಂಡಲೇಶ್ವರರ ಸಂಗಮ ಕ್ಷೇತ್ರ ಪ್ರವೇಶ, ಗಂಗಾಪೂಜೆ ವಾರಾಣಸಿ ಮಾದರಿಯಲ್ಲಿ ದೀಪಾರತಿ

ಫೆ.19: ನದಿ ಪಾತ್ರದಲ್ಲಿ ಚಂಡಿಕಾ ಹೋಮದ ಪೂರ್ಣಾಹುತಿ, ಸಪ್ತ ನದಿಗಳಿಂದ ತಂದ ತೀರ್ಥವನ್ನು ತ್ರಿವೇಣಿ ಸಂಗಮದಲ್ಲಿ ಸಂಯೊಜನೆ, ಮಹೋದಯ ಪುಣ್ಯಕಾಲದ ಮಹಾಮಾಘ ಸ್ನಾನ

ಪುಣ್ಯಸ್ನಾನ ಮಾಡಲಿರುವ ಕುಮಾರಸ್ವಾಮಿ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುಣ್ಯಸ್ನಾನ ಮಾಡಲಿದ್ದಾರೆ. ಫೆ. 19ರಂದು ಮಧ್ಯಾಹ್ನ 12 ಗಂಟೆಗೆ ನಡೆಯುವ ಧರ್ಮಸಭೆ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT