ಎಲ್ಲ ರಾಜ್ಯಗಳಲ್ಲೂ ತ್ರಿಭಾಷಾ ಸೂತ್ರ: ಇಂದಿರಾ–ಎಸ್ಸೆನ್ ಒತ್ತಾಯ
ನವದೆಹಲಿ, ಫೆ. 24– ಎಲ್ಲ ರಾಜ್ಯಗಳು ತ್ರಿಭಾಷಾ ಸೂತ್ರವನ್ನು ಅಂಗೀಕರಿಸಬೇಕಾದ ಅಗತ್ಯವನ್ನು ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಒತ್ತಿ ಹೇಳಿದರು.
ಹೆಣ್ಣೊ–ಗಂಡೊ?
ಕೌಲಲಾಂಪುರ, ಫೆ. 24– ಇಪ್ಪತ್ತೇಳು ವರ್ಷಗಳ ನಂತರ ತನಗೆ ಲಿಂಗ ಪರಿವರ್ತನೆಯಾಗಿದೆ. ಈ ವೇಳೆಗೆ ಎರಡು ಸಲ ಶಸ್ತ್ರ ಚಿಕಿತ್ಸೆಯಾಯಿತು ಎಂದು ಕೌಲಾಲಂಪುರದ ಚೀನೀ ಹೆಣ್ಣೊಬ್ಬಳು ಹೇಳಿಕೊಂಡಿದ್ದಾಳೆ.
ಶಾಲಾ ಬಸ್ ಸಂಸ್ಥೆಯೊಂದರಲ್ಲಿ ಕೆಲಸಕ್ಕಿರುವ ಈಕೆಯ ಹೆಸರು ಫ್ಯಾಂಗ್ ನಿನ್ ಯೀವ್. ಜುಲೈ ತಿಂಗಳಲ್ಲಿ ಲಿಂಗ ಪರಿವರ್ತನೆಯಾಯಿತಂತೆ. ಅಂದಿನಿಂದ ಸಾರ್ವತ್ರಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಸತತ ಮಾಡಿಸಿಕೊಳ್ಳುತ್ತಿದ್ದಾಳೆ.
ಎರಡು ಸಲ ಶಸ್ತ್ರ ಚಿಕಿತ್ಸೆ ನಡೆದಿದೆ. ಮೂರನೆಯ ಸಲ ನಡೆಸಲು ಯೋಚಿಸಲಾಗಿದೆ.
ಆದಾದ ನಂತರ ಬದಲಾವಣೆ ಸಂಪೂರ್ಣಗೊಂಡಲ್ಲಿ ಆಕೆಯೋ, ಆತನೋ ನಿರ್ಧಾರವಾಗುತ್ತದೆ.
ಆಸ್ಪತ್ರೆಯ ವೈದ್ಯರು ಈ ಸುದ್ದಿಯನ್ನು ಸುಳ್ಳೆಂದು ನಿರಾಕರಿಸಿಲ್ಲ....
ಸೋನಿಯಾ – ರಾಜೀವ್ ಲಗ್ನ ಇಂದು: ಸರಳ ಪದ್ಧತಿ
ನವದೆಹಲಿ, ಫೆ. 24– ಇಂದಿರಾ ಗಾಂಧಿ ಅತ್ತೆಯಾಗುವ ದಿನ ಇಂದು, ಫೆಬ್ರವರಿ 25 ರಂದು ಭಾರತದ ಪ್ರಧಾನಮಂತ್ರಿಯ ಹಿರಿಯ ಮಗನ ಮದುವೆಯೆಂದಾಗ ಆ ಮದುವೆಯ ವೈಭವ ಕುರಿತು, ಊಹಿಸದೆ ಇರುವವರೇ ಇಲ್ಲ. ಆದರೆ ಈ ವೈಭವ– ಆಡಂಬರ ಈ ಮದುವೆಯಲ್ಲಿ ದೂರ.
ಇಂದಿರಾ ಗಾಂಧಿಯವರ ಹಿರಿಯ ಪುತ್ರ ರಾಜೀವ್ ಮತ್ತು ಇಟಲಿ ಕನ್ಯೆ ಸೋನಿಯಾ ಅವರ ವಿವಾಹ ಬಹಳ ಸರಳ.
72ರೊಳಗೆ ಕನ್ನಡ–ಕನ್ನಡ ನಿಘಂಟು: ಸರ್ಕಾರದ ನೆರವಿನಿಂದ ತ್ವರಿತಕಾರ್ಯ
ಬೆಂಗಳೂರು, ಫೆ. 24– 5000 ಪುಟಗಳಲ್ಲಿ ಹೊರಬೀಳಲಿರುವ ಕನ್ನಡ–ಕನ್ನಡ ನಿಘಂಟು ನಾಲ್ಕನೇ ಪಂಚ ವಾರ್ಷಿಕ ಯೋಜನೆಯ ಅಂತ್ಯದೊಳಗೆ ಪೂರ್ಣವಾಗಿ ಸಿದ್ಧವಾಗಲಿದೆ.
ಇಂದು ಈ ಭರವಸೆಯನ್ನು ವ್ಯಕ್ತ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ. ವೆಂಕಟಸುಬ್ಬಯ್ಯ ಅವರು 1972ರೊಳಗಿನ ಈ ಅವಧಿಯಲ್ಲಿ ಈಗಾಗಲೇ ಕಳೆದಿರುವ ಸಮಯವೂ ಸೇರಿದೆಯೆಂದರು.
ಎಲ್ಲ ಕಾಲೇಜು ಶಿಕ್ಷಕರಿಗೆ ಏ. 1 ರಿಂದ ಯು.ಜಿ.ಸಿ. ವೇತನ
ಬೆಂಗಳೂರು, ಫೆ. 24– ವಿಶ್ವವಿದ್ಯಾನಿಲಯದ ಧನ ವಿನಿಯೋಗ ಆಯೋಗದ ವೇತನ ಸ್ಕೇಲುಗಳನ್ನು ರಾಜ್ಯದ ಎಲ್ಲ ಕಾಲೇಜುಗಳಲ್ಲೂ ಕಾರ್ಯಗತ ಮಾಡಲಾಗುವುದೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.