ಬೆಂಗಳೂರು: ಪಕ್ಷದ ಟಿಕೆಟ್ಗಾಗಿ ಪಟ್ಟು ಹಿಡಿದಿಲ್ಲ. ಈ ಸಂಬಂಧ ಪಕ್ಷದ ಆದೇಶವನ್ನು ಶಿರಸಾವಹಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಪಕ್ಷದ ಕೇಂದ್ರ ಕಚೇರಿಗೆ ಗುರುವಾರ ಕಾರ್ಯಕರ್ತರ ಅಹವಾಲು ಆಲಿಸಲು ಬಂದಿದ್ದ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿ, ‘ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ವರಿಷ್ಠರ ತೀರ್ಮಾನಕ್ಕೆ ಬದ್ಧ’ ಎಂದು ತಿಳಿಸಿದರು.
ಅನರ್ಹರಿಗೆ ಟಿಕೆಟ್ ನೀಡುವುದಿಲ್ಲವೆಂದು ಎಲ್ಲೂ ಹೇಳಿಲ್ಲ. ಅವರು ಪಕ್ಷಕ್ಕೆ ಸೇರುವುದಾದರೆ ಸ್ವಾಗತ. ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ, ಅವಕಾಶಗಳನ್ನು ವರಿಷ್ಠರು ನೀಡುತ್ತಾರೆ ಎಂದು ಸವದಿ ಹೇಳಿದರು.
ರಾಜು ಕಾಗೆ ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಹೇಳಿಲ್ಲ. ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಿ ಉಳಿಸಿಕೊಳ್ಳಲಾಗುವುದು ಎಂದರು.
ಪ್ರತಿಯೊಬ್ಬ ಸಚಿವರೂ ಪ್ರತಿ ದಿನ ಪಕ್ಷದ ಕಚೇರಿಗೆ ಬಂದು ಎರಡರಿಂದ ಮೂರು ಗಂಟೆಗಳ ಕಾಲ ಇದ್ದು, ಕಾರ್ಯಕರ್ತರ ಅಹವಾಲು ಮತ್ತು ಸಲಹೆ ಸೂಚನೆಗಳನ್ನು ಆಲಿಸುವ ಕೆಲಸ ಆರಂಭಿಸಲಾಗಿದೆ. ಸರ್ಕಾರದ ಜಂಜಾಟದಲ್ಲಿ ಕಾರ್ಯಕರ್ತರನ್ನು ನಿರ್ಲಕ್ಷಿಸುವಂತಾಗಬಾರದು ಎಂದು ತಿಳಿಸಿದರು.